ನವದೆಹಲಿ (ಪಿಟಿಐ): ಅಕ್ರಮ ಸಂತಾನ ಹೊಂದಿರುವ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ನ ಹಿರಿಯ ನಾಯಕ ಎನ್.ಡಿ. ತಿವಾರಿ ಅವರನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸುವ ಸಲುವಾಗಿ ರಕ್ತ ಸಂಗ್ರಹದ ಔಪಚಾರಿಕ ಕ್ರಮಗಳನ್ನು ಎಲ್ಲಿ ಮತ್ತು ಹೇಗೆ ಮಾಡಬೇಕೆಂಬ ಬಗ್ಗೆ ಈ ತಿಂಗಳ 19ರಂದು ನಿರ್ಧರಿಸಲಾಗುವುದು ಎಂದು ದೆಹಲಿ ಹೈಕೋರ್ಟ್ ಮಂಗಳವಾರ ಹೇಳಿದೆ.
ತಿವಾರಿ ಅವರ ರಕ್ತ ಸಂಗ್ರಹ ಮತ್ತು ಇತರ ಔಪಚಾರಿಕ ಕ್ರಮಗಳ ಬಗ್ಗೆ ಅವರ ಪರ ವಕೀಲ ಮತ್ತು ತಿವಾರಿ ಪುತ್ರನೆಂದು ಹೇಳಿಕೊಂಡಿರುವ ದೆಹಲಿ ಯುವಕ ರೋಹಿತ್ ಶೇಖರ್ ಉಪಸ್ಥಿತಿಯಲ್ಲಿ ತಾವು ನಿರ್ಧಾರ ಕೈಗೊಳ್ಳುವುದಾಗಿ ಹೈಕೋರ್ಟ್ನ ಜಂಟಿ ರಿಜಿಸ್ಟ್ರಾರ್ ದೀಪಕ್ ಗಾರ್ಗ್ ತಿಳಿಸಿದ್ದಾರೆ. ಡಿಎನ್ಎ ಪರೀಕ್ಷೆಗೆ ಒಳಗಾಗುವಂತೆ ಹೈಕೋರ್ಟ್ನ ಏಕ ಸದಸ್ಯ ಪೀಠವು ಡಿ. 23ರಂದು ತಿವಾರಿ ಅವರಿಗೆ ಆದೇಶಿಸಿತ್ತು.