ಯಲಬುರ್ಗಾ: ಕ್ರೀಡೆಗಳ ನಿಯಮಗಳ ಪರಿಪಾಲನೆ ಹಾಗೂ ತೀರ್ಪುಗಳಿಗೆ ಬದ್ಧರಾಗಿ ಉತ್ತಮ ಆಟ ಆಡುವ ಮೂಲಕ ಕ್ರೀಡೆಗಳನ್ನು ಉತ್ತೇಜನಗೊಳಿಸುವಲ್ಲಿ ಹೆಚ್ಚು ಸಕ್ರಿಯರಾಗುವಂತೆ ಕ್ರೀಡಾಪಟುಗಳಿಗೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹೇಶ ಸಬರದ್ ಹೇಳಿದರು.
ಸ್ಥಳೀಯ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಬುಧವಾರ ತಾಲ್ಲೂಕು ಮಟ್ಟದ ಪ್ರೌಢ ಶಾಲಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿವಿಧ ತಂಡ ತಂಡಗಳ ಪಂದ್ಯ ನಡೆಯುತ್ತಿರುವ ಸಂದರ್ಭದಲ್ಲಿ ಅನಾವಶ್ಯಕವಾಗಿ ತಲೆದೋರುವ ತಂಟೆ ತಕರಾರುಗಳಿಂದ ಕ್ರೀಡಾಕೂಟದ ಸಂಘಟಕರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡುತ್ತದೆ, ಇಂತಹ ಬೆಳವಣಿಗೆಯಿಂದ ಕ್ರೀಡಾ ಕ್ಷೇತ್ರದಲ್ಲಿ ಬೇಸರ ತರುವಂತಹ ಸಂಗತಿಯಾಗಿರುತ್ತದೆ ಎಂದು ನುಡಿದರು.
ಪ್ರತಿಯೊಬ್ಬ ಕ್ರೀಡಾಪಟು ಕ್ರೀಡಾಮನೋಭಾವದೊಂದಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ ಅವರು, ತಾಲ್ಲೂಕು ಮಟ್ಟದ ಈ ಕ್ರೀಡಾಕೂಟದಲ್ಲಿ ಜಯಗಳಿಸಿದ ಉತ್ತಮ ತಂಡಗಳು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧಿಸಿ ಈ ನಾಡಿನ ಕೀರ್ತಿ ತರುವಂತೆ ಆಶಯ ವ್ಯಕ್ತಪಡಿಸಿದರು.
ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ತುಳಸಿರಾಮ ಕುಂಬಾರೆ ಮಾತನಾಡಿ, ಎರಡು ದಿನಗಳ ಕಾಲ ನಡೆಯುವ ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಪ್ರತಿಯೊಂದು ತಂಡಕ್ಕು ಗೆಲುವು ಸಾಧಿಸಬೇಕೆಂಬ ಹಂಬಲ ವಿರುತ್ತದೆ. ಗೆಲುವು ಅಥವಾ ಸೋಲು ಎರಡರಲ್ಲಿ ಯಾವುದೇ ಬಂದರೂ ಸಂತೋಷದಿಂದ ಸ್ವಾಗತಿಸಿ ಸೌಹಾರ್ದಯುತವಾಗಿ ಆಡವಾಡಲು ಸಲಹೆ ನೀಡಿದರು.
ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ ವಗ್ಯಾನವರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪದವಿ ಕಾಲೇಜಿನ ಪ್ರಾಚಾರ್ಯ ಬಸವರಾಜ ಬಡಿಗೇರ, ದ್ಯಾಮಣ್ಣ ಮುಗಳಿ, ಟಿ.ಸಿ. ಪಾಟೀಲ, ವೆಂಕಟೇಶ, ಬಸವರಾಜ ಅಡೆವೆಪ್ಪನವರ, ದೈಹಿಕ ಶಿಕ್ಷಕ ಕೆ.ಎನ್. ಮುಳಗುಂದ ಸ್ವಾಗತಿಸಿ ವಂದಿಸಿದರು.