ನವದೆಹಲಿ (ಪಿಟಿಐ): ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ನಿರ್ಧಾರಕ್ಕೆ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರು ಸೋಮವಾರ ಇಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಸೋನಿಯಾ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಸಹ ಹಾಜರಿದ್ದರು.
ಆಂಧ್ರಪ್ರದೇಶದ ಉಸ್ತುವಾರಿಯೂ ಆಗಿರುವ ಎಐಸಿಸಿ ಕಾರ್ಯದರ್ಶಿ ಗುಲಾಂ ನಬಿ ಅಜಾದ್ ಅವರನ್ನು ಭೇಟಿ ಮಾಡಿದ ರೆಡ್ಡಿ, ತೆಲಂಗಾಣ ವಿಷಯವಾಗಿ ಒಂದು ತಾಸು ಮಾತುಕತೆ ನಡೆಸಿದರು.
ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯನ್ನು ಕಾಂಗ್ರೆಸ್ ಪಕ್ಷವು ವಿರೋಧಿಸಿಲ್ಲ. ನಿಯಮಾನುಸಾರ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕಾಲಾವಕಾಶ ಬೇಕಾಗುತ್ತದೆ ಎಂದು ಕಾಂಗ್ರೆಸ್ ವಕ್ತಾರ ಪಿ.ಸಿ.ಚಾಕೊ ಇತ್ತೀಚೆಗೆ ಹೇಳಿಕೆ ನೀಡಿದ್ದರು.
ಪ್ರತ್ಯೇಕ ತೆಲಂಗಾಣ ಬೆಂಬಲಿಸಿರುವ ಆ ಭಾಗದ ಕಾಂಗ್ರೆಸ್ ಸಂಸದರು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಆದರೆ ಸಂಸದರ ಭೇಟಿಯ ವೇಳೆಯನ್ನು ಸೋನಿಯಾ ಗಾಂಧಿ ಅವರು ನಿಗದಿಗೊಳಿಸಿಲ್ಲ ಎಂದು ಮೂಲಗಳು ತಿಳಿಸಿವೆ.