ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಭದ್ರಾ ಜಲಾಶಯದ ಹೂಳೆತ್ತಲು ಆಗ್ರಹ:8 ಮತ್ತು 9ರಂದು ಬಿಎಸ್‌ಆರ್ ಕಾಂಗ್ರೆಸ್‌ನಿಂದ ಉಪವಾಸ ಸತ್ಯಾಗ್ರಹ

Last Updated 4 ಜುಲೈ 2012, 5:15 IST
ಅಕ್ಷರ ಗಾತ್ರ

ಬಳ್ಳಾರಿ:  ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ ಜನ, ಜಾನು ವಾರು, ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿನ ಹೂಳುತೆಗೆಸಲು ಒತ್ತಾಯಿಸಿ ಜು. 8 ಮತ್ತು 9 ರಂದು ತುಂಗಭದ್ರಾ ಜಲಾಶಯದ ದಡದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಅಧ್ಯಕ್ಷ ಬಿ. ಶ್ರೀರಾಮುಲು ನೇತೃತ್ವದಲ್ಲಿ `ಹೂಳುತೆಗೆಸಿ-ನೀರು ಉಳಿಸಿ~ ಎಂಬ ಘೋಷಣೆ ಅಡಿ ಅನ್ನದಾತನಿಗಾಗಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ ತಿಳಿಸಿದರು. 

 ನಗರದ ಎಸ್‌ಪಿ ವೃತ್ತದ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಕಚೇರಿ ಬಳಿ ಮಂಗಳವಾರ `ಹೂಳುತೆಗೆಸಿ-ನೀರು ಉಳಿಸಿ~ ಅನ್ನದಾತನಿಗಾಗಿ ಉಪವಾಸ ರಥಯಾತ್ರೆಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ ಜನ ಹಾಗೂ ರೈತರಿಗೆ ತುಂಗಭದ್ರಾ ಜಲಾಶಯದ ಮಹತ್ವ ತಿಳಿಸಲು ಮತ್ತು ಹೂಳುತೆಗೆಸಲು ಹಮ್ಮಿಕೊಂಡಿರುವ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಲು ಪ್ರೇರೇಪಿಸಲಾಗುವುದು. ಪ್ರತಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಿಗೆ ರಥಯಾತ್ರೆ ತೆರಳಲಿದೆ ಎಂದರು.

ತುಂಗಭದ್ರಾ ಜಲಾಶಯ 130 ಟಿಎಂಸಿ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿತ್ತು. ಆದರೆ ಸದ್ಯ ಕೇವಲ 100ಟಿಎಂಸಿ ಮಾತ್ರ ನೀರು ಸಂಗ್ರಹ ವಾಗುತ್ತಿದೆ. ಉಳಿದ 30ಟಿಎಂಸಿಯಷ್ಟು ಹೂಳು ತುಂಬಿದೆ. ಜಲಾಶಯ ನಿರ್ಮಾಣ ಮಾಡುವಾಗ ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳು ನೀರು ಉಪಯೋಗಿಸಬೇಕು ಎಂದು ಒಪ್ಪಂದವಾಗಿತ್ತು. ಆಂಧ್ರಕ್ಕೆ ಸಿಗಬೇಕಾದ ಪಾಲು ಸಿಗುತ್ತಿದೆ. ಆದರೆ ಜಲಾಶಯದಲ್ಲಿ 30ಟಿಎಂಸಿ ಹೂಳು ತುಂಬಿಕೊಂಡಿರುವ ಕಾರಣ ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳ ರೈತ, ಜನರಿಗೆ ಕಳೆದ ಹಲವಾರು ವರ್ಷಗಳಿಂದ ಅಗತ್ಯಕ್ಕೆ ತಕ್ಕಂತೆ ನೀರು ದೊರೆಯುತ್ತಿಲ್ಲ ಎಂದು ದೂರಿದರು.

ಅಧಿಕಾರಿಕ್ಕಾಗಿ ಬಿಜೆಪಿ ಮುಖಂಡರು ಕಿತ್ತಾಟ ನಡೆಸುತ್ತಿರುವುದು ಬೇಸರ ತಂದಿದೆ. ಜನಹಿತ ಮರೆತು ಕುರ್ಚಿಗಾಗಿ ಹಪಹಪಿಸುತ್ತಿರುವುದು ರಾಜ್ಯದ ಜನತೆ ತಲೆತಗ್ಗಿಸುವಂತೆ ಮಾಡಿದೆ. ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದು ಬಿದ್ದಿದೆ. ಆಡಳಿತ ನಡೆಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜ್ಯಕ್ಕೆ ಭೇಟಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅರುಣಾ ತಿಪ್ಪಾರೆಡ್ಡಿ, ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಗೋನಾಳ್ ರಾಜಶೇಖರಗೌಡ, ಪಾಲಿಕೆ ಮೇಯರ್ ಹನುಮಂತಪ್ಪ, ಉಪಮೇಯರ್ ಇಬ್ರಾಹಿಂ ಬಾಬು, ಸದಸ್ಯರಾದ ಶಶಿಕಲಾ, ಮಲ್ಲನಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT