ಹೊನ್ನಾಳಿ: ಪಟ್ಟಣದ ತುಂಗಭದ್ರಾ ನದಿಗೆ ನೂತನ ದ್ವಿಪಥ ಸೇತುವೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗಿದೆ. ಸರ್ಕಾರ ರೂ 20 ಕೋಟಿ ಬಿಡುಗಡೆ ಮಾಡಿದ್ದು, 18 ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಗುರುವಾರ ಪಟ್ಟಣದ ತುಂಗಭದ್ರಾ ನದಿ ಸೇತುವೆ ನಿರ್ಮಾಣ ಕಾಮಗಾರಿ ಪರಿಶೀಲಿಸಿ, ಗುತ್ತಿಗೆದಾರರಿಂದ ಮಾಹಿತಿ ಪಡೆದ ನಂತರ ಅವರು ಮಾತನಾಡಿದರು.
ಸೇತುವೆ ನಿರ್ಮಾಣಕ್ಕೆ ಕಳೆದ ವರ್ಷ ಸರ್ಕಾರ ರೂ 30 ಕೋಟಿ ಬಿಡುಗಡೆ ಮಾಡಿತ್ತು. ಆದರೆ, ವಿಸ್ತೃತ ಯೋಜನಾ ವರದಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದ ನಂತರ ಕಾಮಗಾರಿ ವೆಚ್ಚ ರೂ 20 ಕೋಟಿಗೆ ಇಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬಸವಾಪಟ್ಟಣ-ಹೊನ್ನಾಳಿ-ನ್ಯಾಮತಿ-ಸೌಳಂಗ ರಸ್ತೆ ಅಭಿವೃದ್ಧಿಗೆ ರೂ 146 ಕೋಟಿ ಮಂಜೂರಾಗಿದೆ. ಗೊಲ್ಲರಹಳ್ಳಿಯಿಂದ ಹೊನ್ನಾಳಿಯ ತುಮ್ಮಿನಕಟ್ಟಿ ರಸ್ತೆವರೆಗೆ ಚತುಷ್ಪಥ ರಸ್ತೆ ನಿರ್ಮಿಸಲಾಗುವುದು. ಪಟ್ಟಣದ ಟಿ.ಬಿ. ಸರ್ಕಲ್ನಿಂದ ಪರಿಶಿಷ್ಟ ಕಾಲೊನಿವರೆಗೆ, ನ್ಯಾಮತಿ-ಸುರಹೊನ್ನೆ ಊರುಗಳ ವ್ಯಾಪ್ತಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುವುದು. ಈ ವ್ಯಾಪ್ತಿಯಲ್ಲಿ ಬಸ್ ನಿಲ್ದಾಣ, 5 ಸರ್ಕಲ್ಗಳು ನಿರ್ಮಾಣವಾಗಲಿವೆ ಎಂದರು.
ಬಿಜೆಪಿ ಮುಖಂಡರಾದ ಎಂ.ಪಿ. ರಮೇಶ್, ಎಂ.ಪಿ. ರಾಜು, ಜಿಲ್ಲಾ ಉಪಾಧ್ಯಕ್ಷ ಎ.ಬಿ. ಹನುಮಂತಪ್ಪ, ತಾಲ್ಲೂಕು ಅಧ್ಯಕ್ಷ ಶಾಂತರಾಜ್ ಪಾಟೀಲ್ ಬಲಮುರಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಚಾಟಿ ಶೇಖರಪ್ಪ, ಸದಸ್ಯರಾದ ಪಟ್ಟಣಶೆಟ್ಟಿ ಪರಮೇಶ್ವರಪ್ಪ, ಸಣ್ಣಕ್ಕಿ ಬಸವನಗೌಡ, ಕೆ. ನಿಂಗಪ್ಪ, ಮಂಜುಳಾ ಮಂಜಪ್ಪ, ರಾಮಮೂರ್ತಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಸುರೇಶ್, ಎಪಿಎಂಸಿ ನಿರ್ದೇಶಕ ಧರ್ಮಪ್ಪ, ನರೇಂದ್ರ ಕಂಬಳಿ, ಕಡೂರಪ್ಪ, ಪ್ರಭು ಇತರರು ಇದ್ದರು.