ಕಂಪ್ಲಿ: ಸ್ಥಳೀಯ ಕೋಟೆ ಬಳಿ ಹರಿಯುವ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಂಪ್ಲಿ-ಗಂಗಾವತಿ ಸೇತುವೆ ಒಂದೆರೆಡು ಕಡೆ ವಿಸ್ತರಣಾ ಕೊಂಡಿ ಸಡಿಲಗೊಂಡು ಕಬ್ಬಿಣ ಸರಳು ಹಾಳಾಗಿರುವುದು ಶುಕ್ರವಾರ ಕಂಡುಬಂತು.
ಕಳೆದ ಏಳು ದಿನಗಳಿಂದ ಸೇತುವೆ ಮೇಲೆ ಪ್ರವಾಹ ಕಾಣಿಸಿಕೊಂಡ ಪರಿಣಾಮ ನೀರಿನ ರಭಸಕ್ಕೆ ವಿಸ್ತರಣಾ ಕೊಂಡಿ ಸಡಿಲಗೊಂಡು ಕಬ್ಬಿಣದ ಸರಳು ಹಾಳಾಗಿರಬಹುದೆಂದು ಅಂದಾಜಿಸಲಾಗುತ್ತಿದೆ.
ಸದ್ಯ ಸೇತುವೆ ಮೇಲೆ ಎರಡು ದಿನಗಳಿಂದ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಬಸ್, ಲಾರಿ, ಭಾರಿ ಸರಕು ವಾಹನಗಳ ಸಂಚಾರಕ್ಕೆ ಅನುಮತಿ ನೀಡಿಲ್ಲ. ಸೇತುವೆ ಒಂದು ವಾರದಿಂದ ನೀರಿನಲ್ಲಿ ಮುಳಗಡೆಯಾಗಿ ಅಧಿಕ ತೇವಾಂಶಕ್ಕೆ ತುತ್ತಾಗಿರುವುದರಿಂದ ಸೇತುವೆ ತಪಾಸಣೆ ನಂತರ ಸಂಚಾರ ಪುನಾರಾರಂಭಗೊಳ್ಳುವ ನಿರೀಕ್ಷೆ ಇದೆ.
ಬಸ್, ಲಾರಿಗಳ ಸಂಚಾರಕ್ಕೆ ಮುನ್ನ ಸೇತುವೆಯಲ್ಲಿ ಸಡಿಲಗೊಂಡಿರುವ ವಿಸ್ತರಣಾ ಕೊಂಡಿಗಳನ್ನು ದುರಸ್ತಿ ಮಾಡಿ ಅನುಕೂಲ ಮಾಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.