ಹೊಸಪೇಟೆ: ಮೂರು ವರ್ಷಗಳ ನಂತರ ಮೊದಲ ಬಾರಿಗೆ ತುಂಗಭದ್ರಾ ಜಲಾಶಯ ಬಹುತೇಕ ಭರ್ತಿಯಾಗುವ ಹಂತ ತಲುಪಿದೆ. ಜಲಾಶಯದ ಹತ್ತು ಕ್ರೆಸ್ಟ್ಗೇಟ್ಗಳ ಮೂಲಕ 15 ಸಾವಿರ ಜಲಾಶಯದ ಎಡ ಹಾಗೂ ಬಲದಂಡೆ ಕಾಲುವೆಗಳ ಮೂಲಕವೂ ಹತ್ತು ಸಾವಿರ ಕ್ಯೂಸೆಕ್ ನೀರನ್ನು ಸೋಮವಾರ ಹೊರಬಿಡಲಾಗಿದೆ.
1633 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಸೋಮವಾರ ನೀರಿನ ಮಟ್ಟ 1631.65 ಅಡಿ ತಲುಪಿದ್ದು, ಒಳಹರಿವು 85248, ಹೊರಹರಿವು 10239 ಕ್ಯೂಸೆಕ್ ಇತ್ತು.
ಮುಂಗಾರು ಮಳೆ ಅಭಾವದ ಹಿನ್ನೆಲೆಯಲ್ಲಿ ಮೂರು ವರ್ಷವೂ ಜಲಾಶಯ ತಡವಾಗಿ ಅಂದರೆ ಆಗಸ್ಟ್ ಕೊನೆಯ ವಾರದಲ್ಲಿ ತುಂಬುತ್ತಿತ್ತು. ಆದರೆ ಈ ವರ್ಷ ಜಲಾನಯನ ಪ್ರದೇಶ ಸೇರಿದಂತೆ ತುಂಗಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿಯೂ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಹುಬೇಗನೇ ಜಲಾಶಯ ತುಂಬಿದೆ.
ಭಾನುವಾರ ಬೆಳಿಗ್ಗೆ 8 ರಿಂದ ಸೋಮವಾರ 8ರ ನಡುವಿನ ಅವಧಿಯಲ್ಲಿಯೇ ಒಳಹರಿವು 61 ಸಾವಿರ ಕ್ಯೂಸೆಕ್ನಿಂದ 85 ಸಾವಿರಕ್ಕೆ ಹೆಚ್ಚುವ ಮೂಲಕ ಒಂದೇ ದಿನದಲ್ಲಿ 6 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದ ನೀರಿನ ಮಟ್ಟ 1595.27 ಅಡಿ ಇದ್ದು, ಕೇವಲ 14.398 ಟಿಎಂಸಿ ಅಡಿ ಸಂಗ್ರಹವಿತ್ತು.
ಮುಂದುವರಿದ ಮಳೆ: ಜಲಾನಯನ ಪ್ರದೇಶದಲ್ಲಿ ವರುಣನ ಆರ್ಭಟ ಮುಂದುವರಿದ ಹಿನ್ನೆಲೆಯಲ್ಲಿ ಹರಿದು ಬರುತ್ತಿರುವ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿದ್ದು ಒಳಹರಿವಿನ ಪ್ರಮಾಣ ಆಧರಿಸಿ ನೀರು ಹರಿಬಿಡುವ ಸಾಧ್ಯತೆ ಇದೆ ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿ ಗಳು `ಪ್ರಜಾವಾಣಿ' ಗೆ ತಿಳಿಸಿದ್ದಾರೆ.
ಮುನ್ಸೂಚನೆ ನೀಡಿಲ್ಲ: ಜಲಾನಯನ ಪ್ರದೇಶ ಸೇರಿದಂತೆ ಜಲಾಶಯ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಈಗಾಗಲೇ 15ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಯಾವುದೇ ಸಂದರ್ಭದಲ್ಲಿ ನೀರನ್ನು ಬಿಡಬಹುದು ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ತಿಳಿಸಿದ್ದರೂ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತಗಳು ನದಿಪಾತ್ರದ ಜನತೆಗೆ ಯಾವುದೇ ಮುನ್ನೆಚ್ಚರಿಕೆ ನೀಡಿಲ್ಲ.
ಜಿಲ್ಲಾಡಳಿತ ಸೂಚನೆ ನೀಡದೇ ಇರುವುದರಿಂದ ದೇಶ ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ಹಂಪಿ, ಕಂಪ್ಲಿ, ಸಿರಗುಪ್ಪಾ ಸೇರಿದಂತೆ ನದಿಪಾತ್ರದ ಜನರು ನದಿಗಳಿಗೆ ಇಳಿಯುವುದು, ಮೀನು ಹಿಡಿಯುವುದು ಮತ್ತು ನದಿಯಲ್ಲಿ ತೆಪ್ಪಹಾಕಿ ಜನರನ್ನು ಸಾಗಿಸುವ ಚಟುವಟಿಕೆಗಳು ಮುಂದುವರಿದಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.