ಹಿರೇಕೆರೂರ: ತಾಲ್ಲೂಕಿನ ಕುಡುಪಲಿ ಗ್ರಾಮದ ಸಮೀಪ ತುಂಗಾ ಮೇಲ್ದಂಡೆ ಯೋಜನೆಯ ಉಪ ಕಾಲುವೆಯ ಕಾಂಕ್ರೀಟ್ ಕಿತ್ತುಹೋಗಿದ್ದು ಮತ್ತೆ ಒಡೆಯುವ ಆತಂಕ ಎದುರಾಗಿದೆ.
ಎರಡು ತಿಂಗಳ ಹಿಂದೆ ಒಡೆದು ಬೆಳೆ ಹಾಳಾಗಲು ಕಾರಣವಾಗಿದ್ದ ಸ್ಥಳದಲ್ಲಿಯೇ ಮತ್ತೆ ಕೊರಕಲು ಉಂಟಾಗಿ ಒಡೆಯುವ ಸಂಭವ ಕಂಡುಬರುತ್ತಿದೆ. ಸಮರ್ಪಕವಾಗಿ ದುರಸ್ತಿ ಮಾಡದೆ ಇರುವುದು ಪುನಃ ಕೊರಕಲು ಬೀಳಲು ಕಾರಣವಾಗಿದೆ. ಸರಿಪಡಿಸಲು ತುಂಗಾ ಮೇಲ್ದಂಡೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಹೊಲಗಾಲುವೆಗಳನ್ನು ಸರಿಯಾಗಿ ನಿರ್ಮಿಸದೆ ಇರುವುದರಿಂದ ರೈತರ ಹೊಲಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ಇದರಿಂದ ಉಪ ಕಾಲುವೆಯಲ್ಲಿ ಹರಿಯುವ ನೀರಿಗೆ ಕೆಲವು ರೈತರು ತಡೆ ಒಡ್ಡುವ ಮೂಲಕ ಒಣಗಿ ಹೋಗುತ್ತಿರುವ ಬೆಳೆಗಳಿಗೆ ನೀರು ಹರಿಯುವಂತೆ ಅನುಕೂಲ ಮಾಡಿಕೊಳ್ಳುತ್ತಿದ್ದಾರೆ. ಇದು ಉಪ ಕಾಲುವೆ ಒಡೆಯಲು ಕಾರಣವಾಗುತ್ತಿದೆ ಎನ್ನಲಾಗುತ್ತಿದೆ.