ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಡು ಪಂಚೆ ಫಕೀರನಿಗೆ ನಾಡ ನಮನ

Last Updated 3 ಅಕ್ಟೋಬರ್ 2012, 4:45 IST
ಅಕ್ಷರ ಗಾತ್ರ

ಹೂವಿನಹಡಗಲಿ: ಗಾಂಧೀಜಿಯ ಆದರ್ಶಗಳು ನಮಗೆ ದಾರಿದೀಪ ಎಂದು ಶಿಕ್ಷಕ ದಯಾನಂದ ಹೇಳಿದರು.
ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ಮಂಗಳ ವಾರ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಕ್ಷಕಿ ಸಿಸ್ಟರ್ ಹೃದಯಾ ಮಾತನಾಡಿ ಗಾಂಧೀಜಿ ಮತ್ತು ಲಾಲ್‌ಬಹದ್ದೂರ್ ಶಾಸ್ತ್ರಿಯವರು ನಮ್ಮ ದೇಶದ ಅಮೂಲ್ಯ ರತ್ನಗಳು ಎಂದರು.

ಫಾದರ್ ರಾಜೇಶ್ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು. ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಜಯಂತಿಯಲ್ಲಿ ಮಕ್ಕಳು ಹಾಡಿನ ಮೂಲಕ ನಮನ ಸಲ್ಲಿಸಿದರು.

ಶಿಕ್ಷಕರಾದ ಗುರುಸ್ವಾಮಿ ಮತ್ತು ಲವೀನಾ ಗಾಂಧೀಜಿ ಜೀವನ ಚರಿತ್ರೆ ಬಗ್ಗೆ ಮಾತನಾಡಿದರು. ಹೇಮಾವತಿ ಸ್ವಾಗತಿಸಿದರು. ಶ್ರುತಿ ಪಾಟೀಲ್ ನಿರೂ ಪಿಸಿದರು. ಮನು ಜೈನ್ ವಂದಿಸಿದರು.

ಹೊಸಪೇಟೆ ವರದಿ

“ಗಾಂಧೀಜಿಯವರ ವಿಚಾರ ಹಾಗೂ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ” ಎಂದು ಹಿರಿಯ ಗಾಂಧಿವಾದಿ ಕೆ.ನಾರಾಯಣ ಭಟ್ ಹೇಳಿದರು.

ಇಲ್ಲಿನ ಲೋಕನಾಯಕ ಜಯಪ್ರಕಾಶ ನಾರಾಯಣ ಸರ್ವೋದಯ ಟ್ರಸ್ಟ್ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜನ್ಮದಿನದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಭಾತಫೇರಿ ಉದ್ಘಾಟಿಸಿ ಅವರು ಮಾತನಾಡಿದರು.

ರಾಜಕೀಯ ಕ್ಷೇತ್ರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿರುವಾಗ ದೇಶದ ಭವಿಷ್ಯವಾದ ಮಕ್ಕಳು ಅದರ ಪರಿಣಾಮಗಳನ್ನು ತಿಳಿದು ಭ್ರಷ್ಟಾಚಾರ ತೊಲಗಿಸುವುದು ಸೇರಿದಂತೆ ದೇಶದ ಉಜ್ವಲ ಭವಿಷ್ಯಕ್ಕಾಗಿ ಪಣತೊಡಬೇಕಾಗಿದೆ ಎಂದರು.

ಗಾಂಧಿ ಚೌಕಿನಲ್ಲಿ ಪ್ರತಿಮೆಗೆ ಪೂಜೆಸಲ್ಲಿಸಿದ ವಿವಿಧ ಶಾಲಾ ಮಕ್ಕಳು ನಗರದ ಪ್ರಮುಖ ಬೀದಿಗಳಲ್ಲಿ ಘೋಷಣೆಗಳೊಂದಿಗೆ ಮೆರವಣಿಗೆ ನಡೆಸಿದರು. ನಂತರ ಸರ್ದಾರ ಪಟೇಲ್ ಸ್ಮಾರಕ ಪ್ರೌಢಶಾಲೆಯಲ್ಲಿ ಸಾಮೂಹಿಕ ವಿಷ್ಣು ಸಹಸ್ರನಾಮ, ಸರ್ವೋದಯ ಪ್ರಾರ್ಥನೆ ಹಾಗೂ ಸಭಾ ಕಾರ್ಯಕ್ರಮಗಳು ನಡೆದವು.

ಸಚಿವರಿಗಾಗಿ ಕಾದ ಮಕ್ಕಳು: ಗಾಂಧಿ ಜಯಂತಿ ಅಂಗವಾಗಿ ರಾಷ್ಟ್ರಪಿತನಿಗೆ ಸಚಿವರು ಮಾಲಾರ್ಪಣೆ ಮಾಡಲು ಬರುತ್ತಾರೆ ಎಂಬ ವಿಷಯ ಅರಿತ ಮಕ್ಕಳು ಸಚಿವರಿಗಾಗಿ ಒಂದು ಗಂಟೆ ಕಾಲ ಕಾದರೂ ಸಚಿವರು ಬಾರದಿದ್ದಾಗ ಹಿರಿಯ ಗಾಂಧಿವಾದಿ ಹಾಗೂ ಮಕ್ಕಳು ತಮ್ಮಷ್ಟಕ್ಕೆ ತಾವು ಮಾಲಾರ್ಪಣೆ ಮಾಡಿದರು.

ಕೂಡ್ಲಿಗಿ ವರದಿ

ಮಹಾತ್ಮಾ ಗಾಂಧೀಜಿಯವರ ತತ್ವ, ಆದರ್ಶಗಳನ್ನು ತಿಳಿಯುವುದಷ್ಟೇ ಅಲ್ಲದೆ, ಅವುಗಳನ್ನು ಬದುಕಿನಲ್ಲಿ ಅಳ ವಡಿಸಿಕೊಳ್ಳಲು ಪ್ರಯತ್ನಿಸಬೇಕೆಂದು ಉಪನ್ಯಾಸಕ ಬಸವರಾಜ್ ತಿಳಿಸಿದರು.

ಮಂಗಳವಾರ ಪಟ್ಟಣದ ಗಾಂಧೀಜಿ ಚಿತಾಭಸ್ಮ ಸ್ಮಾರಕದ ಆವರಣದಲ್ಲಿ ತಾಲ್ಲೂಕು ಆಡಳಿತ, ಸರ್ಕಾರಿ ಸಂ.ಪ.ಪೂ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಗಾಂಧೀಜಿ ಹಾಗೂ ಲಾಲ್‌ಬಹಾದುರ್ ಶಾಸ್ತ್ರಿ ಯವರ ಜನ್ಮದಿನಾಚರಣೆ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ಗಾಂಧೀಜಿಯವರ ಸತ್ಯ, ಶಾಂತಿ, ಅಹಿಂಸೆ, ಸತ್ಯಾಗ್ರಹ ತತ್ವಗಳನ್ನು ಮನನ ಮಾಡಿಕೊಳ್ಳಬೇಕು, ಸಾಧ್ಯವಿದ್ದಷ್ಟೂ ಅವುಗಳನ್ನು ಪಾಲಿಸಬೇಕೆಂದರು. ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾ ಅಧಿಕಾರಿ ಸಣ್ಣವೀರಣ್ಣ ಗಾಂಧೀಜಿಯವರ ಮನ ಪರಿವರ್ತನೆಗೆ ಕಾರಣವಾದ ಗೀತೆಯನ್ನು ಹಾಡಿದರು.

ತಹಶೀಲ್ದಾರ್ ಜವರೇಗೌಡರು ಗಾಂಧೀಜಿ ಹಾಗೂ ಲಾಲ್‌ಬಹಾದ್ದೂರ್ ಶಾಸ್ತ್ರಿಯವರ ಭಾವಚಿತ್ರ ಗಳಿಗೆ ಮಾಲಾರ್ಪಣೆ ಮಾಡಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾದ ಲಕ್ಷ್ಮೀಬಾಯಿ ಕಾಂತರಾಜ್ ಮತ್ತು ಉಪಾಧ್ಯಕ್ಷರಾದ ಬೆಣ್ಣೆ ಕೊಟ್ರೇಶ್ ಪಾಲ್ಗೊಂಡಿದ್ದರು.

ಕುರುಗೋಡು ವರದಿ
ಮಹಾತ್ಮಾ ಗಾಂಧಿಯವರು ಈ ಯುಗದಲ್ಲಿ ಬದುಕಿ ಬಾಳಿದ ಚೇತನ ಎಂದು ಉಪನ್ಯಾಸಕ ನಂಜುಂಡಯ್ಯ ಅಭಿಪ್ರಾಯಪಟ್ಟರು.

ಪಟ್ಟಣದ ಗಾಂಧಿ ತತ್ವ ಆಧಾರಿತ ಬಾಲಕಿಯ ವಸತಿ ಪ್ರೌಢಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ 144ನೇ ಗಾಂಧೀಜಿ ಮತ್ತು ಲಾಲ್‌ಬಹಾದ್ದೂರ್ ಶಾಸ್ತ್ರಿ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಉಪನ್ಯಾಸಕ ಎಲ್. ಶ್ರೀನಿವಾಸ, ಸತ್ಯ, ಅಹಿಂಸೆ ಮತ್ತು ಉಪವಾಸ ಸತ್ಯಾಗ್ರಹಗಳಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಯವರ ಈ ತತ್ವಗಳನ್ನು ಅಳವಡಿಸಿಕೊಳ್ಳಲು ಸಲಹೆ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ವೀರಭದ್ರಯ್ಯ ಹಿರೇಮಠ ಮಾತನಾಡಿದರು.

ಶಿಕ್ಷಣ ಸಂಯೋಜಕ ಕೆ. ಗಾದಿ ಲಿಂಗಪ್ಪ, ಶಿಕ್ಷಕರಾದ ನೀಲಕಂಠ ಡಿ.ಕೆ., ಹನುಮಂತಪ್ಪ, ಅನಂತನಾಗ್, ಓದೇ ಕಾರಮ್ಮ, ದೇವಿಕಾ, ಮಾಲತಿ, ಫಣಿ ರೇಖಾ ಉಪಸ್ಥಿತರಿದ್ದರು. ಪ್ರಕಾಶ್ ಶೆಟ್ಟಿ ನಿರೂಪಿಸಿದರು. ರವಿಕುಮಾರ್ ಸ್ವಾಗತಿಸಿದರು. ಪುನಿತ್‌ಕುಮಾರ್ ವಂದಿಸಿದರು. ಇದಕ್ಕೂ ಮುನ್ನ ವಿದ್ಯಾರ್ಥಿನಿಯರು ಗಾಂಧೀಜಿ ಭಾವಚಿತ್ರದೊಂದಿಗೆ ಪ್ರಭಾತ್ ಫೇರಿ ನಡೆಸಿದರು. 

ಕಂಪ್ಲಿ ವರದಿ
ಪಟ್ಟಣದ ಕನ್ನಡ ಹಿತರಕ್ಷಕ ಸಂಘದ ತಿರುವಿನಲ್ಲಿ ಮಂಗಳವಾರ ಪೇಟೆ ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಡಿ. ವೀರಪ್ಪ ಮಹಾತ್ಮಾ ಗಾಂಧಿ ವೃತ್ತ ನಾಮ ಫಲಕ ಉದ್ಘಾಟಿಸಿದರು.

ನಾಮಫಲಕ ಉದ್ಘಾಟನಾ ಸಮಾರಂಭದಲ್ಲಿ ಪುರಸಭೆ ಸದಸ್ಯ ಕೆ.ಎಂ. ಹೇಮಯ್ಯಸ್ವಾಮಿ, ಮುಖಂಡ ಅರವಿ ಬಸವನಗೌಡ, ಮುಕ್ಕುಂದಿ ಬಸವರಾಜ್, ಎಲ್. ವಿದ್ಯಾಶಂಕರ್, ಪಿ. ಮೂಕಯ್ಯ ಸ್ವಾಮಿ, ವಾಲಿ ಕೊಟ್ರಪ್ಪ, ಕಪ್ಪರದ ಕಾಶಿನಾಥ ಸ್ವಾಮಿ, ಎಸ್.ಡಿ. ಬಸವರಾಜ್, ಚಿನ್ನದಕಂತಿ ಶಿವಮೂರ್ತಿಸ್ವಾಮಿ, ಪುಟ್ಟಿ ಬಸವನ ಗೌಡ, ಸಿ.ಕೆ. ಪಟದಯ್ಯ, ಎಸ್. ಬಂಡೆಯ್ಯ ಸ್ವಾಮಿ, ಭತ್ತದ ಮಂಜುನಾಥ್ ಇತರರು ಹಾಜರಿದ್ದರು.

ಸಿರುಗುಪ್ಪ ವರದಿ
ತಾಲ್ಲೂಕಿನ ಸರ್ಕಾರಿ ಕಿರಿಯ, ಹಿರಿಯ ಮತ್ತು ಪ್ರೌಢಶಾಲೆಗಳಲ್ಲಿಯ ಸಮಸ್ಯೆ ಮತ್ತು ಶಿಕ್ಷಕರ ಕುಂದು ಕೊರತೆಗಳ ಬಗ್ಗೆ ಮಂಗಳವಾರ ನಡೆದ ಗಾಂಧೀ ಜಯಂತಿಯಲ್ಲಿ ಶಿಕ್ಷಕರು ಮುಕ್ತವಾಗಿ ಶಾಸಕರೊಂದಿಗೆ ಚರ್ಚೆ ನಡೆಸಿದರು.

ಪಟ್ಟಣದ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿ ಗಾಂಧೀ ಜಯಂತಿ ಅಂಗವಾಗಿ ನಡೆದ ಶಿಕ್ಷಕರೊಂದಿಗೆ ಶೈಕ್ಷಣಿಕ ಸಮಾಲೋಚನೆ ಹಾಗೂ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳಿಗೆ ವಿದ್ಯುತ್ ಸೌಲಭ್ಯ , ಕುಡಿಯುವ ನೀರು, ಶೌಚಾಲಯ ನಿರ್ವಹಣೆ, ಶಿಕ್ಷಕರಿಗೆ ವೈದ್ಯಕೀಯ ಸೌಲಭ್ಯ, ವಸತಿ ಸೌಕರ್ಯ, ಪಡಿತರ ಕಾರ್ಡು, ಗುರುಭವನ ನಿರ್ಮಿಸುವ ಬಗ್ಗೆ ಶಿಕ್ಷಕರು ಶಾಸಕ ಎಂ.ಎಸ್. ಸೋಮಲಿಂಗಪ್ಪ ಅವರೊಂದಿಗೆ ಮುಕ್ತವಾಗಿ ಚರ್ಚಿಸಿದರು.

ಹೊನ್ನರಹಳ್ಳಿ ಗ್ರಾಮದಲ್ಲಿರುವ ಗಡಿನಾಡ ಕನ್ನಡಿಗರ ವಸತಿ ಶಾಲೆಗೆ ಪುಸ್ತಕ ವಿತರಣೆ, ರಸ್ತೆ ದುರಸ್ತಿ ಪಡಿಸುವ ಬಗ್ಗೆ ಗಮನ ಸೆಳೆಯಲಾಯಿತು.

ಇದೇ ವೇದಿಕೆಯಲ್ಲಿ ಎಲ್ಲಾ ಶಿಕ್ಷಕ ವೃಂದವನ್ನು ಶಾಸಕರು ಗೌರವಿಸಿ ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಅರುಣ ಪ್ರತಾಪರೆಡ್ಡಿ, ಬಿ.ಇ.ಓ ಬಿ.ಕೆ. ರುದ್ರಮುನಿ, ಜಿ.ಪಂ.ಸದಸ್ಯ ಡಿ.ಸೋಮಪ್ಪ ಮಾತನಾಡಿದರು.

ಪುರಸಭೆ ಅಧ್ಯಕ್ಷ ಬಿ.ಈರಣ್ಣ, ತೆಕ್ಕಲಕೋಟೆ ಪ.ಪಂ.ಅಧ್ಯಕ್ಷ ಮಾರೆಪ್ಪ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸುಳುವಾಯಿ ಮಲ್ಲಿಕಾರ್ಜುನ ಮತ್ತಿತರರು ಹಾಜರಿದ್ದರು.

ಮರಿಯಮ್ಮನಹಳ್ಳಿ ವರದಿ
ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಂಗಳವಾರ ಮಹಾತ್ಮಾ ಗಾಂಧೀಜಿಯವರ 144ನೇ ಜಯಂತಿಯನ್ನು ಆಚರಿಸಿದರು.

ಹಗರಿಬೊಮ್ಮನಹಳ್ಳಿ ಬ್ಲಾಕ್ ಕಾಂಗ್ರೆಸ್ ಆಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್ ಮಾತನಾಡಿ, ಗಾಂಧೀಜಿ ಯವರ ಸತ್ಯ, ಅಹಿಂಸೆ ಮತ್ತು ಮಾನವೀಯ ಮೌಲ್ಯಗಳನ್ನು ಜೀವನ ದಲ್ಲಿ ಆಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ರಾದ ಎಸ್. ಕೃಷ್ಣಾನಾಯ್ಕ, ದೊಡ್ಡರಾಮಣ್ಣ ಮುಖಂಡರಾದ ಹೆಗ್ಡಾಳ ರಾಮಣ್ಣ, ಎಲ್.ಬಾಲಾಜಿ ನಾಯ್ಕ, ಎನ್.ಬುಡೇನ್‌ಸಾಬ್, ಬಿ.ಎಂ.ಎಸ್. ಚಂದ್ರಶೇಖರಯ್ಯ, ಬೋಸಪ್ಪ, ಬಿ.ರಾಮಣ್ಣ, ಬಿ.ವಿ. ಶಿವಯೋಗಿ, ಛತ್ರೆಪ್ಪ, ಲಕ್ಷ್ಮಣ ನಾಯ್ಕ, ರಾಮಾ ನಾಯ್ಕ ಇತರರು ಹಾಜರಿದ್ದರು.

ಪ್ರೌಢಶಾಲೆ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಮಂಗಳವಾರ ಮಹಾತ್ಮಾ ಗಾಂಧೀಜಿ ಯವರ 144ನೇ ಜಯಂತಿ ಆಚರಿಸಲಾಯಿತು.

ಉಪಪ್ರಾಚಾರ್ಯ ಬಿ.ಬೆಂಜಮಿನ್ ರತ್ನಾಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ದರು. ವಿದ್ಯಾರ್ಥಿಗಳು ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಸದಸ್ಯರಾದ ಲಲಿತಮ್ಮ ಹೂಗಾರ, ಶಿಕ್ಷಕರಾದ ಅನಸೂಯಮ್ಮ, ರೇವಣ್ಣ, ಸುಭಾಷ್, ಅಲ್ಲಾ ಬಕ್ಷ್, ಕೆ.ವಿರೇಶ್, ಕುಮಾರಸ್ವಾಮಿ, ಇಬ್ರಾಹಿಂ ಬಡೇಖಾನ್, ಸುಮಲತಾ, ರಶ್ಮಿ, ಅಂಬುಜಾಕ್ಷಿ ಇತರರು ಉಪಸ್ಥಿತರಿದ್ದರು.

ಸಂಡೂರು ವರದಿ
ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಅಂಗವಾಗಿ ಕೃಪಾನಿಲಯ ಶಾಲೆಯಲ್ಲಿ ವಿದ್ಯಾರ್ಥಿಗಳು ಸರ್ವ ಧರ್ಮಗಳ ಗ್ರಂಥಗಳನ್ನು ಓದಿದರು.
ಮುಖ್ಯ ಶಿಕ್ಷಕಿ ತೆರೇಸಾ ಮಾರ್ಟಿನ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಶಿಕ್ಷಕ ವಿ.ಎಂ.ನಾಗಭೂಷಣ್ ಅವರು ಮಹಾತ್ಮಾ ಗಾಂಧಿ ಮತ್ತು ಲಾಲ್‌ಬಹದ್ದೂರ್ ಶಾಸ್ತ್ರಿಗಳ ಕುರಿತು ಉಪನ್ಯಾಸ ನೀಡಿದರು. ಭಗವದ್ ಗೀತೆಯನ್ನು -ಅಪೂರ್ವ, ಬೈಬಲ್-ಸುನೀತಾ. ಕುರಾನ್-ಕರಿಶ್ಮಾ, ಜೈನ ಗ್ರಂಥವನ್ನು -ಮೋನಿಕಾ ಪಠಣ ಮಾಡಿದರು.

ಶಿಕ್ಷಕ ಮುರಳೀಧರ್ ಮತ್ತು ಮಕ್ಕಳು ರಘುಪತಿ ರಾಘವ ರಾಜಾರಾಂ ಭಜನೆ ಹಾಡಿದರು. ಶಿಕ್ಷಕಿ ಸ್ಟೆಲ್ಲಾ ಮೇರಿ  ಸರ್ವಧರ್ಮ ಸಮಾನತೆ ಸಾರುವ ಹಾಡು ಹಾಡಿ, ವಂದನಾರ್ಪಣೆ ಸಲ್ಲಿಸಿದರು.

ಶಿಕ್ಷಕಿಯರಾದ ಪ್ರಮೀಳಾ, ನಿರ್ಮಲಾ, ಸಿಸ್ಟರ್ ಲೀನಾ,  ಕೆ.ಬಿ. ಪಾರ್ವತಿ, ವಸಂತಾ, ಶಾಂತಾ, ಕಾಶಮ್ಮ, ಕವಿತಾ, ಕೋಮಲಾ,  ನೋಯಲ್, ಪಾರ್ವತಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT