ಚಿತ್ರದುರ್ಗ: ತಾಲ್ಲೂಕಿನ ತುರುವನೂರು ಗ್ರಾಮದಲ್ಲಿನ ವೀರಸೌಧ ನಿಷ್ಪ್ರಯೋಜಕವಾಗಿ ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿವರ್ತನೆಗೊಂಡಿದೆ.
ಸ್ವಾತಂತ್ರ ಯೋಧರ ನೆನಪಿಗಾಗಿ ನಿರ್ಮಿಸಿರುವ ವೀರಸೌಧದ ಅಕ್ಷರಶಃ ಇಂದು ಪಾಳು ಬಿದ್ದಿದೆ. ಈ ಕಟ್ಟಡದ ಮೂಲ ಉದ್ದೇಶವೇ ಈಡೇರುತ್ತಿಲ್ಲ. ಈ ವೀರಸೌಧದ ಬಾಗಿಲು ತೆರೆಯುವುದೇ ಅಪರೂಪ. ಇತ್ತೀಚೆಗೆ ಈ ವೀರಸೌಧ ರೈತ ಸಂಪರ್ಕಕ್ಕೂ ಬಳಕೆಯಾಗುತ್ತಿದ್ದು, ಶೇಂಗಾ ಮತ್ತಿತರರ ಬೀಜಗಳನ್ನು ಸಂಗ್ರಹಿಸಿಡುತ್ತಾರೆ. ಈ ಕಟ್ಟಡದ ಆವರಣ ಸೋಮಾರಿಗಳು ನಿದ್ದೆ ಮಾಡುತ್ತಾರೆ. ಜತೆಗೆ ಇಲ್ಲಿ ಜೂಜಾಟ ಸೇರಿದಂತೆ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೂ ಯಾರೂ ಇತ್ತ ಗಮನಹರಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ವೀರಸೌಧದ ಕಳಪೆ ಕಾಮಗಾರಿಯಿಂದ ಕಟ್ಟಡದ ಮೇಲ್ಛಾವಣಿ ಕಾಂಕ್ರೀಟ್ ಉದುರುತ್ತಿದೆ. ಈ ವೀರಸೌಧಕ್ಕೆ ಕಂಪೌಂಡ್ ಇಲ್ಲ. ಇದರಿಂದ ಈ ವೀರಸೌಧದ ಜಾಗವನ್ನು ಸಹ ಅಕ್ರಮವಾಗಿ ಕಬಳಿಸುವ ಪ್ರಯತ್ನವೂ ನಡೆಯುತ್ತಿದೆ. ಕಂಪೌಂಡ್ ನಿರ್ಮಿಸಿದರೆ ಒತ್ತುವರಿ ನಿಯಂತ್ರಿಸಲು ಮತ್ತು ಅನೈತಿಕ ಚಟುವಟಿಕೆಗಳನ್ನು ನಿಯಂತ್ರಿಸಲು ಅನುಕೂಲವಾಗುತ್ತದೆ ಎಂದು ಆಗ್ರಹಿಸಿದ್ದಾರೆ.
ಈ ವೀರಸೌಧಕ್ಕೆ ಕಾಯಕಲ್ಪ ನೀಡಿ ರಚನಾತ್ಮಕ ಚಟುವಟಿಕೆಗಳಿಗೆ ಬಳಸಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ಆರ್.ವಿ. ಜಯಪ್ರಕಾಶ, ರವಿಕುಮಾರ್, ಸಿದ್ದೇಶ್, ನಟೇಶ್, ಉಮಾಪತಿ ಆಗ್ರಹಿಸಿದ್ದಾರೆ.