ಕುಶಾಲನಗರ: ಕೊಡಗಿನ ಪವಿತ್ರ ಧಾರ್ಮಿಕ ಕ್ಷೇತ್ರವಾದ ತಲಕಾವೇರಿಯಲ್ಲಿ ಸೋಮವಾರ ರಾತ್ರಿ ಕಾವೇರಿ ತೀರ್ಥೋದ್ಭವದ ಸಂದರ್ಭ ಸಂಗ್ರಹಿಸಿದ ತೀರ್ಥವನ್ನು ಮಂಗಳವಾರ ಇಲ್ಲಿನ ಕಾವೇರಿ ನದಿಯ ಸೇತುವೆ ಬಳಿ ಕಾವೇರಿ ಪ್ರತಿಮೆ ನಿರ್ಮಾಣ ಸಮಿತಿ ವತಿಯಿಂದ ಭಕ್ತಾದಿಗಳಿಗೆ ವಿತರಿಸಲಾಯಿತು.
ತುಲಾ ಸಂಕ್ರಮಣದ ಅಂಗವಾಗಿ ಸಮಿತಿ ವತಿಯಿಂದ ನಾಗರಿಕರಿಗೆ ಕಾವೇರಿ ತೀರ್ಥ ವಿತರಿಸಿ ನಂತರ ಅನ್ನ ಸಂತರ್ಪಣೆ ಮಾಡಲಾಯಿತು.
ಕಾವೇರಿ ತೀರ್ಥ ಸ್ವೀಕರಿಸಿ ರಸ್ತೆಬದಿ ಸಸಿನೆಟ್ಟು ಮಾತನಾಡಿದ ಸಂಸದ ಎಚ್.ವಿಶ್ವನಾಥ್, ಸಮಿತಿ ವತಿಯಿಂದ ನಿರ್ಮಿಸಲುದ್ದೇಶಿಸಿರುವ ಕಾವೇರಿ ಪ್ರತಿಮೆ ನಿರ್ಮಾಣಕ್ಕೆ ತಾವು ಅಗತ್ಯ ಸಹಕಾರ ನೀಡಲಾಗುವುದು ಎಂದ ಅವರು, ಜೀವನದಿ ಕಾವೇರಿಯಿಂದ ನಾಡಿನ ಜನತೆಗೆ ಸುಭೀಕ್ಷೆ, ಸುಖ- ಶಾಂತಿ, ನೆಮ್ಮದಿ ಲಭಿಸಲಿ ಎಂದು ನುಡಿದರು.
ಸಮಿತಿ ಅಧ್ಯಕ್ಷ ಬಬೀಂದ್ರಪ್ರಸಾದ್ ಸಮಿತಿ ವತಿಯಿಂದ ರೂ.15 ಲಕ್ಷ ವೆಚ್ಚದಲ್ಲಿ ಕುಶಾಲನಗರ ಪಟ್ಟಣದ ಪ್ರವೇಶ ದ್ವಾರವಾದ ನದಿದಂಡೆಯ ಸೇತುವೆ ಬಳಿ ನಿರ್ಮಿಸಲಿರುವ ಕಾವೇರಿ ಪ್ರತಿಮೆ ನಿರ್ಮಾಣಕ್ಕೆ ಜನಪ್ರತಿನಿಧಿಗಳು, ದಾನಿಗಳ ಸಹಕಾರ ಕೋರಿದರು.
ಜಿ.ಪಂ.ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಪ.ಪಂ.ಸದಸ್ಯ ಅಬ್ದುಲ್ ಖಾದರ್, ಉದ್ಯಮಿಗಳಾದ ಎಸ್ಎಲ್ಎನ್ ಕಾಫಿ ಕಂಪೆನಿಯ ವಿಶ್ವನಾಥ್, ವಿಶ್ವ ಕಾರ್ಯಪ್ಪ, ಮುಖಂಡರಾದ ಜೆ.ಪಿ.ಅರಸ್, ಬಿ.ಎಸ್.ಚಂದ್ರಶೇಖರ್, ಸಮಿತಿ ಪದಾಧಿಕಾರಿಗಳಾದ ರವೀಂದ್ರಪ್ರಸಾದ್, ಚಂದ್ರಮೋಹನ್, ವಿಜೇಂದ್ರಪ್ರಸಾದ್, ವನಿತಾ, ಎನ್ಎಸ್ಎಸ್ ಅಧಿಕಾರಿ ಸಬಲಂ ಭೋಜಣ್ಣರೆಡ್ಡಿ ಮತ್ತಿತರರು ಇದ್ದರು.