ಮಂಗಳೂರು: ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ತುಳು ಭಾಷೆಯನ್ನು ಸೇರ್ಪಡೆ ಮಾಡುವ ಪ್ರಸ್ತಾವವನ್ನು ಪರಿಗಣಿಸಲು ಕೇಂದ್ರ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ ಎಂದು ಕೇಂದ್ರದ ಇಂಧನ ಸಚಿವ ಎಂ. ವೀರಪ್ಪ ಮೊಯಿಲಿ ಹೇಳಿದರು.
ವಿಶಾಲ ಫೌಂಡೇಶನ್ ಮತ್ತು ಚಾರಿಟಬಲ್ ಟ್ರಸ್ಟ್ ಹಾಗೂ ಕಲ್ಕೂರ ಪ್ರತಿಷ್ಠಾನ ಭಾನುವಾರ ನಗರದ ಎಸ್ಡಿಎಂ ಉದ್ಯಮಾಡಳಿತ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಡಾ.ಕೆ.ಈ. ರಾಧಾಕೃಷ್ಣ ಅವರ `ಸತ್ಯಪ್ಪೆ ಬಾಲೆಳು~ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತದ ಇತರ ಕೆಲವು ಭಾಷೆಗಳನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಚಿಂತನೆ ನಡೆದಿದೆ. ಆದರೆ ತುಳು ಭಾಷೆಯಲ್ಲಿ ಈವರೆಗೆ ಆಗಿರುವ ಸಂಶೋಧನೆಗಳ ಸಂಖ್ಯೆ ಕಡಿಮೆ ಇದೆ. ಮತ್ತಷ್ಟು ಹೆಚ್ಚುವರಿ ಸಂಶೋಧನೆಗಳನ್ನು ತ್ವರಿತವಾಗಿ ಮಾಡುವ ಮೂಲಕ ತುಳುವಿನ ಮಹತ್ವವನ್ನು ಹೊರಜಗತ್ತಿಗೆ ತಿಳಿಸಿಕೊಡಬೇಕು ಎಂದರು.
ತುಳು ಸಾಹಿತಿಗಳು ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿರುವ ಪರಿ ಉತ್ತಮವಾದದ್ದು. ಆದರೆ ಭಾಷಾ ಸಂಶೋಧನೆಗೆ ಹೆಚ್ಚಿನ ಮಹತ್ವವನ್ನು ನೀಡಲು ಸಾಹಿತಿಗಳು ಮುಂದಾಗಬೇಕು ಎಂದರು.
ಇದರಿಂದ ಭಾಷೆಯು ಕೇವಲ ಸಾಹಿತ್ಯಿಕವಾಗಿ ಶ್ರೀಮಂತಗೊಳ್ಳುವುದು ಮಾತ್ರವಲ್ಲದೇ, ಅದರ ವ್ಯಾಪ್ತಿ ಹೆಚ್ಚಾಗುವುದು ಎಂದರು.