ನವದೆಹಲಿ (ಪಿಟಿಐ): ಕಾಂಗ್ರೆಸ್ ಮತ್ತು ಮಿತ್ರಪಕ್ಷ ತೃಣಮೂಲ ಕಾಂಗ್ರೆಸ್ ನಡುವಿನ ಭಿನ್ನಾಭಿಪ್ರಾಯ ಹೇಳಿಕೆಗಳನ್ನು ತಳ್ಳಿಹಾಕಿರುವ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಕಪಿಲ್ ಸಿಬಲ್, ಲೋಕಪಾಲ ಹಾಗೂ ವಿದೇಶಿ ನೇರ ಬಂಡವಾಳ ಹೂಡಿಕೆ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಹಿನ್ನಡೆ ಉಂಟಾಗಲು ವಿರೋಧ ಪಕ್ಷಗಳೇ ಕಾರಣ ಎಂದು ದೂರಿದ್ದಾರೆ.
ಕರಣ್ ಥಾಪರ್ ಅವರ `ಇಂಡಿಯಾ ಟುನೈಟ್~ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡುತ್ತಿದ್ದ ಅವರು ಎಫ್ಡಿಐಗೆ ಸಂಬಂಧಿಸಿದಂತೆ ಸರ್ಕಾರದ ಹಿನ್ನಡೆಗೆ ಯುಪಿಎ ಮಿತ್ರ ಪಕ್ಷಗಳು ಕಾರಣವೇ ಎಂದು ಕೇಳಿದಾಗ, `ಈ ವಿಷಯ ಸಂಸತ್ತಿನಲ್ಲಿ ಮಂಡನೆಯಾದಾಗ ಬಿಜೆಪಿ ಸೇರಿದಂತೆ ವಿರೋಧ ಪಕ್ಷಗಳು ಗದ್ದಲ ಎಬ್ಬಿಸಿ ಕಲಾಪ ನಡೆಯದಂತೆ ಮಾಡಿದವು ಎಂದು ಚಾಟಿ ಬೀಸಿದರು.
ವಿರೋಧ ಪಕ್ಷಗಳು ಮತ್ತು ಮಿತ್ರ ಪಕ್ಷಗಳಿಂದ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಪರಿಸ್ಥಿತಿಯನ್ನು ನಿಭಾಯಿಸಬಲ್ಲರೇ ಎಂದು ಕೇಳಿದಾಗ `ನಮ್ಮದು ಮೈತ್ರಿ ಸರ್ಕಾರವಾಗಿದ್ದು ಸಿದ್ಧಾಂತಗಳಲ್ಲಿ ರಾಜಿ ಮಾಡಿಕೊಳ್ಳಬೇಕಾಗಿದೆ. ನಾವೆಲ್ಲ ಒಟ್ಟಾಗಿ ನಿಂತು ಇಡೀ ದೇಶಕ್ಕೆ ಉತ್ತಮ ಮಾರ್ಗದರ್ಶನ ನೀಡಬೇಕಾಗಿದೆ. ಖಚಿತ ನೀತಿಗಳು ಮತ್ತು ಸಿದ್ಧಾಂತಗಳ ಬಗ್ಗೆ ಅಂತಿಮವಾಗಿ ಜನರೇ ನಿರ್ಧರಿಸಬೇಕು~ ಎಂದು ಹೇಳಿದರು.