ಚಾಮರಾಜನಗರ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸುಲಿದ ತೆಂಗಿನಕಾಯಿ ಖರೀದಿಸುವ ಕೇಂದ್ರ ಶನಿವಾರದಿಂದ ಆರಂಭಗೊಂಡಿದೆ.
ಕೇಂದ್ರಕ್ಕೆ ಚಾಲನೆ ನೀಡಿದ ಉಸ್ತುವಾರಿ ಸಚಿವ ವಿ. ಸೋಮಣ್ಣ ಮಾತನಾಡಿ, ತೆಂಗು ಬೆಳೆಗಾರರ ನೆರವಿಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ ತೆಂಗಿನಕಾಯಿ ಖರೀದಿಸಲು ಖರೀದಿ ಕೇಂದ್ರ ತೆರೆಯಲಾಗಿದೆ. ಕೇಂದ್ರದಲ್ಲಿ ಪಾರದರ್ಶಕವಾಗಿ ಖರೀದಿ ಪ್ರಕ್ರಿಯೆ ನಿರ್ವಹಿಸಬೇಕು ಎಂದು ಸೂಚಿಸಿದರು.
ಬೆಳೆಗಾರರು ತರುವ ತೆಂಗಿನಕಾಯಿ ಯನ್ನು ನಿಯಮಾನುಸಾರ ಸರಿಯಾದ ತೂಕ ಮಾಡಿ ಖರೀದಿಸಬೇಕು. ತೆಂಗು ಖರೀದಿ ಸಂಬಂಧ ನೀಡಲಾಗಿರುವ ಸೂಚನೆ ಪಾಲನೆ ಮಾಡಬೇಕು. ಶೀಘ್ರವೇ, ಬೆಳೆಗಾರರಿಗೆ ಹಣ ಸಂದಾ ಯವಾಗುವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ರೂ.1,400 ಬೆಂಬಲ ಬೆಲೆ: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ಗೆ 1,400 ರೂನಂತೆ ಎಫ್ಎಕ್ಯೂ ಗುಣಮಟ್ಟದ ಸುಲಿದ ತೆಂಗಿನಕಾಯಿ ಖರೀದಿಸಲಾಗುತ್ತದೆ. ಪ್ರತಿ ರೈತರಿಂದ ಗರಿಷ್ಠ 50 ಕ್ವಿಂಟಲ್ ತೆಂಗಿನಕಾಯಿ ಖರೀದಿ ಮಾಡಲಾ ಗುತ್ತದೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿಯು ಖರೀದಿ ಏಜೆನ್ಸಿಯಾಗಿ ಕಾರ್ಯ ನಿರ್ವಹಿಸಲಿದೆ.
ಖರೀದಿ ಕೇಂದ್ರದಲ್ಲಿ ಮೊದಲಿಗೆ ರೈತರ ದಾಖಲಾತಿ ಪರಿಶೀಲಿಸಿ ಅನುದಾನದ ಲಭ್ಯತೆಗೆ ಅನುಸಾರ ನೋಂದಣಿ ಮಾಡಿಕೊಳ್ಳಲಾಗುತ್ತದೆ.