ಹುಣಸೂರು: ಗಂಟಲಿನಲ್ಲಿ ತೆಂಗಿನ ಕಾಯಿ ಸಿಲುಕಿ ಸಾಕಾನೆ ಸಾವನ್ನಪ್ಪಿರುವುದು ತಡವಾಗಿ ಬೆಳಕಿಗೆ ಬಂದಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಆನೆ ಚೌಕೂರು ವನ್ಯಜೀವಿ ವಲಯದ ಮತ್ತಿಗೋಡು ಆನೆ ಶಿಬಿರದಲ್ಲಿ ಒಂದು ವಾರದ ಹಿಂದೆ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ.
ಸೌಮ್ಯ ಮತ್ತು ಶಾಂತ ಸ್ವಭಾವದ 45 ವರ್ಷದ `ಶೇಖರ' ಎಂಬ ಹೆಸರಿನ ಗಂಡಾನೆ ಸಾವನ್ನಪ್ಪಿದೆ.
ನಡೆದದ್ದೇನು?: `ಆನೆ ಶೇಖರನನ್ನು ಮೇವಿಗೆ ಬಿಡಲಾಗಿತ್ತು. ಆ ಸಮಯದಲ್ಲಿ ಮಾವುತರ ಕಣ್ತಪ್ಪಿಸಿ ತಿತಿಮತಿ ಭಾಗಕ್ಕೆ ಹೋಗಿತ್ತು. ಆಗ ಮಾವುತ ಮತ್ತು ಕಾವಾಡಿಗಳು ತಿತಿಮತಿಯಿಂದ ಚೆನ್ನಂಗಿ ಗ್ರಾಮದ ಮಾರ್ಗವಾಗಿ ಆನೆಕ್ಯಾಂಪ್ಗೆ ಕರೆ ತರುವ ಸಮಯದಲ್ಲಿ ಗ್ರಾಮದ ಜನರು ತೆಂಗಿನ ಕಾಯಿ ತಿನ್ನಲು ನೀಡಿದ್ದರು. ಆ ಸಮಯದಲ್ಲಿ ಒಂದು ಕಾಯಿ ತಿಂದಿತ್ತು. ಎರಡನೇ ಕಾಯಿ ತಿನ್ನುವ ಸಮಯದಲ್ಲಿ ಗಂಟಲಿಗೆ ಸಿಕ್ಕಿ ಕೊಂಡಿದೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ' ಎಂದು ವಲಯ ಅರಣ್ಯಾಧಿಕಾರಿ ದೇವರಾಜ್ ತಿಳಿಸಿದ್ದಾರೆ.
ಪಶು ವೈದ್ಯಾಧಿಕಾರಿ ಡಾ.ಉಮಾಶಂಕ ಚಿಕಿತ್ಸೆ ನೀಡಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ.
ಈ ಕುರಿತು ಪ್ರಜಾವಾಣಿಯೊಂದಿಗೆ ಮಾತನಾಡಿದ ಡಾ.ಉಮಾಶಂಕರ್, ಆನೆಯ ಗಂಟಲಿನಲ್ಲಿ ಕಾಯಿ ಸಿಕ್ಕಿ ಕೊಂಡಿರುವುದು ಪತ್ತೆಯಾದ ಬಳಿಕ ಬೆಂಗಳೂರಿನ ಪಶುವೈದ್ಯ ಕಾಲೇಜಿನ ಪರಿಣಿತರ 3 ಸದಸ್ಯರ ತಂಡ ಕರೆ ತಂದು ಶಸ್ತ್ರಚಿಕಿತ್ಸೆ ನಡೆಸಲು ಸಿದ್ಧತೆ ಮಾಡಲಾಗಿತ್ತು. ಆದರೆ, ಆನೆ ಕೊನೆಯುಸಿರು ಎಳೆದಿತ್ತು ಎಂದು ತಿಳಿಸಿದ್ದಾರೆ.
`20 ವರ್ಷಗಳ ಹಿಂದೆ ಕೊಡಗಿನಲ್ಲಿ ಅರಣ್ಯ ಇಲಾಖೆ ನಡೆಸಿದ ಆಧುನಿಕ ಖೆಡ್ಡದಲ್ಲಿ ಬಂಧಿಸಿ ಮತ್ತಿಗೋಡು ಆನೆ ಕ್ಯಾಂಪ್ನಲ್ಲಿ ತರಬೇತಿ ನೀಡಲಾಗಿತ್ತು. ಹಲವು ಭಾರಿ ಪುಂಡಾನೆ ಹಿಡಿಯಲು ಈ ಆನೆಯನ್ನು ಬಳಸಿಕೊಳ್ಳಲಾಗಿತ್ತು. ಇದಲ್ಲದೇ ಈಚೆಗೆ ನೇರಳಕುಪ್ಪೆ ಗ್ರಾಮದ ಸುತ್ತ ಕಾಣಿಸಿಕೊಂಡಿದ್ದ ಹುಲಿ ಹಿಡಿಯಲು ಮಾಡಲಾಗಿದ್ದ ಕೂಂಬಿಂಗ್ ಕಾರ್ಯಾಚರಣೆಯಲ್ಲಿಯೂ ಶೇಖರ್ ಭಾಗಿಯಾಗಿದ್ದ. 6 ತಿಂಗಳ ಹಿಂದೆ ಕೇರಳದಲ್ಲಿ ಹುಲಿ ಹಿಡಿಯಲು ಶೇಖರ್ ತೆರಳಿದ್ದ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಲಯ ಅರಣ್ಯಾಧಿಕಾರಿ ದೇವರಾಜ್ ಮಾತನಾಡಿ, `ಒಂದು ವಾರದಿಂದ ಕ್ಯಾಂಪ್ಗೆ ಹೋಗದೇ ಕಚೇರಿಯಲ್ಲಿ ಕುಳಿತು ಕೆಲಸ ನಿರ್ವಹಿಸುತ್ತಿದ್ದೇವೆ. ಕ್ಯಾಂಪ್ಗೆ ಹೋದರೆ ಶೇಖರ್ ಕಣ್ಣೇದುರು ಬರುತ್ತಾನೆ' ಎಂದರು.