ಮಲೆನಾಡು ಭಾಗದ ಆರು ಜಿಲ್ಲೆಗಳಲ್ಲಿ ಅಡಿಕೆ ಹೆಚ್ಚು ಬೆಳೆಯುತ್ತಿದ್ದು, ಸುಮಾರು ರೂ 789 ಕೋಟಿಯಷ್ಟು ನಷ್ಟ ಆಗಿದೆ. ಇದರಿಂದ 65 ಸಾವಿರ ರೈತರು ತೊಂದರೆಗೆ ಒಳಗಾಗಿದ್ದಾರೆ. ಹಾಗೆಯೇ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ಹಾಳಾದ ಕಾರಣರೂ 600 ಕೋಟಿ ನಷ್ಟ ಆಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ತೆಂಗು ಬೆಳೆ ಹಾಳಾಗಿರುವ ಬಗ್ಗೆ ಗೋರಖ್ಸಿಂಗ್ ನೇತೃತ್ವದ ಕೇಂದ್ರ ತಂಡ ಇತ್ತೀಚೆಗೆ ರಾಜ್ಯದಲ್ಲಿ ಪ್ರವಾಸ ಮಾಡಿತು. ಎಲ್ಲ ಜಿಲ್ಲೆಗಳಿಗೂ ಅದು ಭೇಟಿ ನೀಡಿ ನಷ್ಟದ ಅಂದಾಜು ಮಾಡಿದೆ. ಕೇಂದ್ರಕ್ಕೆ ಅದು ವರದಿ ಕೊಟ್ಟಿದ್ದು ಪರಿಹಾರ ಇನ್ನೂ ಘೋಷಣೆ ಆಗಿಲ್ಲ ಎಂದು ಅವರು ಹೇಳಿದರು.
ರಾಜ್ಯದ 150 ಹೋಬಳಿಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಬಿತ್ತನೆ ಕಾರ್ಯಕ್ಕೆ ಕುಂಠಿತ ಆಗಿದೆ ಎಂದು ಅವರು ಹೇಳಿದರು. ಮುಂಗಾರಿನಲ್ಲಿ 74.29 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗೆ ಅಂದಾಜು ಮಾಡಲಾಗಿತ್ತು. ಆದರೆ, ಇದುವರೆಗೂ 64.83 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ ಎಂದರು.