ಮುನಿರಾಬಾದ್: ಸ್ಥಳೀಯ ಅಂಜುಮನ್ ಕಮಿಟಿಯ ಶಾದಿಮಹಲ್ ನಿರ್ಮಿಸಲು ಸರ್ಕಾರದಿಂದ ಹಸ್ತಾಂತರವಾಗಿರುವ ಖಾಲಿ ನಿವೇಶನಕ್ಕೆ ವಿಧಿಸಿರುವ ತೆರಿಗೆಯನ್ನು ಮನ್ನಾ ಮಾಡುವಂತೆ ಒತ್ತಾಯಿಸಿ ಈಚೆಗೆ ಅಲ್ಪ ಸಂಖ್ಯಾತರ ಕಲ್ಯಾಣ ಸಚಿವ ಖಮರುಲ್ ಇಸ್ಲಾಂರನ್ನು ಭೇಟಿ ಮಾಡಿ ಕಮಿಟಿ ಸದಸ್ಯರು ಮನವಿ ಪತ್ರ ಸಲ್ಲಿಸಿದರು.
ಶಾಸಕ ಕೆ.ರಾಘವೇಂದ್ರ ಹಿಟ್ನಾಳರ ಜೊತೆ ಕಮಿಟಿಯ ಅಧ್ಯಕ್ಷ ಚಂದೂಸಾಬ್, ಅಲ್ಪಸಂಖ್ಯಾತರ ಸಮಿತಿಯ ಜಿಲ್ಲಾ ಅಧ್ಯಕ್ಷ ಶಾಹಿದ್ ಕವಲೂರ, ಹಿಂದುಳಿದ ವರ್ಗದ ಮುಖಂಡ ಗಾಳೆಪ್ಪ ಇತರರು ಬೆಂಗಳೂರಿನ ಸಚಿವರ ಕಚೇರಿಯಲ್ಲಿ ಮನವಿ ಪತ್ರ ಸಲ್ಲಿಸಿ, ಸ್ಥಳೀಯ ಅಲ್ಪ ಸಂಖ್ಯಾತರ ಅನುಕೂಲಕ್ಕೆಂದು 2012ರಲ್ಲಿ ಜಲಸಂಪನ್ಮೂಲ ಇಲಾಖೆಯಿಂದ ನಿವೇಶನ ಮಂಜೂರಿಯಾಗಿದ್ದು, ವಕ್ಫ ಮಂಡಳಿಯಲ್ಲಿ ನೋಂದಣಿ ಕೂಡ ಆಗಿದೆ.
ಈಗ ಜಲಸಂಪನ್ಮೂಲ ಇಲಾಖೆ ವರ್ಷಕ್ಕೆ ಸುಮಾರು ₨77 ಸಾವಿರ ತೆರಿಗೆಯನ್ನು ಪಾವತಿಸುವಂತೆ ನೋಟಿಸ್ ನೀಡಿದೆ. ಯಾವುದೇ ಆದಾಯವಿಲ್ಲದ ಕಾರಣ ತೆರಿಗೆ ಪಾವತಿಸಲು ಸಾಧ್ಯವಾಗುವು ದಿಲ್ಲ. ಆದ್ದರಿಂದ ತೆರಿಗೆ ಯನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಲಾಗಿದೆ ಎಂದು ಅಧ್ಯಕ್ಷ ಚಂದೂಸಾಬ್ ತಿಳಿಸಿದ್ದಾರೆ.
ಮೂರು ಲಕ್ಷ ಬಿಡುಗಡೆ: ಈದ್ಗಾ ಮೈದಾನಕ್ಕೆ ರಸ್ತೆ ಮತ್ತು ಖಬರ್ಸ್ಥಾನಕ್ಕೆ ಆವರಣಗೋಡೆ ನಿರ್ಮಿಸಲು ಕಳೆದ ವರ್ಷ ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿ ಸರ್ಕಾರ ₨3 ಲಕ್ಷ ಅನುದಾನ ಬಿಡುಗಡೆ ಮಾಡಿದೆ ಎಂದೂ ಚಂದೂಸಾಬ್ ಮಾಹಿತಿ ನೀಡಿದ್ದಾರೆ.