ವಾಹನಗಳ ಸುಗಮ ಸಂಚಾರಕ್ಕಾಗಿ ದರ್ಗಾ ಮುಂದೆ ತಿರುವಿನಲ್ಲಿ ರಸ್ತೆ ವಿಭಜಕ ಅಳವಡಿಸಲಾಗಿತ್ತು. ಆದರೆ ದರ್ಗಾ ಪಕ್ಕದಲ್ಲಿಯ ರಸ್ತೆಯಲ್ಲಿರುವ ಒಳಚರಂಡಿ ಮೇಲೆ ಸ್ಲ್ಯಾಬ್ ಹಾಕದ ಕಾರಣ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ಪುರಸಭೆ ಸದಸ್ಯರಾದ ಮಲ್ಲಿಕಾರ್ಜುನ ಪಾಟೀಲ್, ಸುಭಾಷ ಕುಂಬಾರ, ಪಿಕೆಪಿಎಸ್ ಅಧ್ಯಕ್ಷ ವಿಠಲರಾವ್ ಪಟ್ಟಣಕರ್ ದೂರುತ್ತಾರೆ.
ದರ್ಗಾ ಪಕ್ಕದಲ್ಲಿಯೇ ಸರ್ಕಾರಿ ಕನ್ಯಾ ಪ್ರೌಢಶಾಲೆ ಇದ್ದು, ಶಾಲೆ ಎದುರುಗಡೆ ಚಿಲ್ಲರೆ ಅಂಗಡಿ ವ್ಯಾಪಾರಿಗಳು ನಿಲ್ಲುತ್ತಾರೆ. ಇದರಿಂದ ವಿದ್ಯಾರ್ಥಿನಿಯರಿಗೆ ತೊಂದರೆಯಾಗಿದೆ. ಚರಂಡಿ ದುರಸ್ತಿ ಕೈಗೊಂಡಲ್ಲಿ ಪ್ರೌಢಶಾಲೆಯ ಎದುರುಗಡೆ ಚಿಲ್ಲರೆ ಅಂಗಡಿ ವ್ಯಾಪಾರಿಗಳು ನಿಲ್ಲುವುದು ತಪ್ಪುತ್ತದೆ. ವಿದ್ಯಾರ್ಥಿನಿಯರು ಶಾಲೆ ಒಳಗಡೆ ಪ್ರವೇಶಿಸಲು ಅನುಕೂಲವಾಗುತ್ತದೆ ಎಂದು ಹೇಳುತ್ತಾರೆ. ಚರಂಡಿ ದುರಸ್ತಿ ಬಗ್ಗೆ ಪುರಸಭೆಯಿಂದ ಸೂಕ್ತ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಎಂ.ಡಿ.ಯೂಸುಫ್ ತಿಳಿಸಿದ್ದಾರೆ.