ನೆಲಮಂಗಲ: ಪಟ್ಟಣದ ಗಜಾರಿಯ ಲೇ ಔಟ್ನಲ್ಲಿ ತೆರೆದ ಗುಂಡಿಗೆ ಬಿದ್ದು ಬಾಲಕನೊಬ್ಬ ಮೃತಪಟ್ಟ ದುರ್ಘಟನೆ ಗುರುವಾರ ಮಧ್ಯಾಹ್ನ ಸುಮಾರು 2.30ರ ಸಮಯದಲ್ಲಿ ನಡೆದಿದೆ.
ಮೃತನನ್ನು ಭರತ್ (13) ಎಂದು ಗುರುತಿಸಲಾಗಿದೆ. ಈತ ಹಿಪ್ಪೆ ಆಂಜನೇಯಸ್ವಾಮಿ ಬಡಾವಣೆಯ ನಿವಾಸಿ ನಾಗರಾಜ್ ಎಂಬುವರ ಏಕೈಕ ಪುತ್ರ. ಪಟ್ಟಣದ ಅಡೇಪೇಟೆ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಭರತ್, ತನ್ನ ಗೆಳೆಯರೊಂದಿಗೆ ಆಟವಾಡುತ್ತಿದ್ದಾಗ ಕಾಲು ಜಾರಿ ಗುಂಡಿಗೆ ಬಿದ್ದು ಮೃತನಾಗಿದ್ದಾನೆ.
ಬಡಾವಣೆಯಲ್ಲಿ ತೆಗೆದಿದ್ದ ತೆರೆದ ಗುಂಡಿಗೆ ಭರತ್ ಬಿದ್ದಾಗ ಗೆಳೆಯರು ಗಾಬರಿಗೊಂಡು ಸ್ಥಳೀಯರಿಗೆ ಸುದ್ದಿ ಮುಟ್ಟಿಸಿದರು. ತಕ್ಷಣ ಪೊಲೀಸರು ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಒಂದು ತಾಸಿಗೂ ಹೆಚ್ಚು ಕಾರ್ಯಾಚರಣೆ ನಡೆಸುವ ಮೂಲಕ ಮೃತದೇಹವನ್ನು ಹೊರತೆಗೆದಿದ್ದಾರೆ.
ಶಾಸಕ ಎಂ.ವಿ.ನಾಗರಾಜು ಸ್ಥಳಕ್ಕೆ ಭೇಟಿ ನೀಡಿ ಮೃತನ ಪೋಷಕರಿಗೆ ಸಾಂತ್ವನ ಹೇಳಿದರು.