ನವದೆಹಲಿ (ಪಿಟಿಐ): ಆಂಧ್ರಪ್ರದೇಶ ವಿಭಜನೆಗೆ ಸಂಬಂಧಿಸಿದ ತನ್ನ ವರದಿ ಮತ್ತು ತೆಲಂಗಾಣ ಮೇಲಿನ ಕರಡು ಮಸೂದೆ ಅಂತಿಮಗೊಳಿಸಲು ಹಿರಿಯ ಸಚಿವರ ಸಮಿತಿ ಮಂಗಳವಾರ ವಿಫಲವಾಯಿತು. ಹೀಗಾಗಿ ಕೇಂದ್ರ ಸಂಪುಟಕ್ಕೆ ಇವುಗಳನ್ನು ಸಲ್ಲಿಸುವ ಮುನ್ನ ಮತ್ತೆ ಬುಧವಾರ ಸಭೆ ಸೇರಲು ನಿರ್ಧರಿಸಿತು.
ಸಂವಿಧಾನದ 371–ಡಿ ವಿಧಿಯಡಿ ಹೊಸ ತೆಲಂಗಾಣ ಮತ್ತು ಸೀಮಾಂಧ್ರ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ಮುಂದುವರಿಸುವ ಕುರಿತು ಸಭೆಯಲ್ಲಿ ಸಚಿವರ ಸಮಿತಿ ಚರ್ಚಿಸಿತು. ಇದಲ್ಲದೆ, ತೆಲಂಗಾಣಕ್ಕೆ ರಾಯಲಸೀಮಾದ ಎರಡು ಜಿಲ್ಲೆಗಳನ್ನು ಸೇರಿಸುವ ಪ್ರಸ್ತಾವದ ಬಗ್ಗೆಯೂ ಅದು ಪರಿಶೀಲಿಸಿತು. ಆದರೆ ವರದಿ ಮತ್ತು ಕರಡು ಮಸೂದೆ ಅಂತಿಮಗೊಳಿಸಲು ಸಾಧ್ಯವಾಗಿಲ್ಲ.
ಸಭೆಯಲ್ಲಿ ಸಮಿತಿಯ ಸಚಿವ ಸದಸ್ಯರಲ್ಲದೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ ಮೆನನ್, ಕೇಂದ್ರ ಗೃಹ ಕಾರ್ಯದರ್ಶಿ ಅನಿಲ್ ಗೋಸ್ವಾಮಿ ಸೇರಿದಂತೆ ಉನ್ನತ ಅಧಿಕಾರಿಗಳು ಸಹ ಭಾಗವಹಿಸಿದ್ದರು.
ಸಭೆಯ ಬಳಿಕ ಕೇಂದ್ರ ಸಂಪುಟದಲ್ಲಿ ಆಂಧ್ರಪ್ರದೇಶವನ್ನು ಪ್ರತಿನಿಧಿಸುತ್ತಿರುವ ಎಂ. ಪಲ್ಲಂರಾಜು ಸೇರಿದಂತೆ ಸಚಿವರ ನಿಯೋಗವು, ಕೊನೆಯ ಪ್ರಯತ್ನವಾಗಿ ರಾಜ್ಯ ವಿಭಜನೆ ವಿರೋಧಿಸಿ ಸಮಿತಿಯ ಅಧ್ಯಕ್ಷರಾದ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರಿಗೆ ಮನವಿ ಸಲ್ಲಿಸಿತು.