ನವದೆಹಲಿ (ಪಿಟಿಐ): ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ವಿಚಾರದಲ್ಲಿ ಕಾಂಗ್ರೆಸ್ ಹೋರಾಟಗಾರರ ಒತ್ತಾಯಕ್ಕೆ ಸಂಪೂರ್ಣ ಶರಣಾಗಿದ್ದು, ಹೋರಾಟಗಾರರ ಬೆದರಿಕೆಯಿಂದ ಕಾಂಗ್ರೆಸ್ ದುರ್ಬಲಗೊಂಡಿತ್ತು ಎಂದು ಅಮೆರಿಕ 2009ರಲ್ಲಿ ನಡೆಸಿದ ತೆಲಂಗಾಣ ಕುರಿತ ಪರಿಸ್ಥಿತಿ ಅವಲೋಕನ ವರದಿ ಮಾಹಿತಿಯನ್ನು ವಿಕಿಲೀಕ್ಸ್ ಬಹಿರಂಗಪಡಿಸಿದೆ.
ಟಿಮತಿ ರೋಮರ್ ಈ ಕುರಿತ ಗೌಪ್ಯ ಮಾಹಿತಿಯನ್ನು ಅಮೆರಿಕ ವಿದೇಶಾಂಗ ಇಲಾಖೆಗೆ ಡಿ. 10, 2009ರಲ್ಲಿ ಕಳುಹಿಸಿದ್ದರು.ತೆಲಂಗಾಣ ರಚನೆ ಕುರಿತು ಗೃಹ ಸಚಿವ ಪಿ. ಚಿದಂಬರಂ ಹೇಳಿಕೆ ನೀಡಿದ ಮರು ದಿವಸವೇ ಈ ಬಗ್ಗೆ ಗೌಪ್ಯ ಮಾಹಿತಿಯನ್ನು ರವಾನಿಸಿದ ರೋಮರ್, `ಭಾರತ ಸರ್ಕಾರ ತೆಲಂಗಾಣ ವಿಚಾರದಲ್ಲಿ ಹೋರಾಟಗಾರರಿಗೆ ಶರಣಾಗಿದೆ.
ಇಂತಹ ಹೋರಾಟ ಆಂಧ್ರದ ಆಚೆಗೂ ಪ್ರಸರಿಸಬಹುದು. ಪ್ರತ್ಯೇಕ ರಾಜ್ಯದ ಕೂಗು ರಾಷ್ಟ್ರದಾದ್ಯಂತ ಭುಗಿಲೇಳಬಹುದು. ಇದರಿಂದ ಕಾಂಗ್ರೆಸ್ನಲ್ಲೂ ಒಡಕುಂಟಾಗಬಹುದು~ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.
`ಈ ನಿರ್ಧಾರದಿಂದ ತೆಲಂಗಾಣ ರಚನೆಗೆ ಒತ್ತಾಯಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಟಿಆರ್ಎಸ್ ಮುಖಂಡ ಕೆ. ಚಂದ್ರಶೇಖರ ರಾವ್ ಅವರಿಗೆ ದೊಡ್ಡ ಗೆಲುವು ತಂದುಕೊಟ್ಟಿತು~ ಎಂದು ಅವರು ಹೇಳಿದ್ದರು.