ನವದೆಹಲಿ (ಪಿಟಿಐ): ಕೇಂದ್ರ ಸಚಿವ ಸಂಪುಟದ ಸಭೆ ಶುಕ್ರವಾರ ನಡೆಯಲಿದ್ದು ತೆಲಂಗಾಣ ರಾಜ್ಯ ರಚನೆಯ ವಿಷಯ ಬಹುತೇಕ ಚರ್ಚೆಗೆ ಬರುವ ಸಾಧ್ಯತೆಗಳಿಲ್ಲ.
‘ತೆಲಂಗಾಣ ಕುರಿತು ತಮ್ಮ ಸಚಿವಾಲಯ ಸಿದ್ಧಪಡಿಸಿದ ಕಡತವನ್ನು ಸಂಪುಟದ ಮುಂದೆ ಇಡಬೇಕಾಗಿದೆ. ಆದರೆ ಸಮಯದ ಅಭಾವದಿಂದ ಇದನ್ನು ಪರಿಶೀಲನೆ ನಡೆಸಲು ಆಗಿಲ್ಲ. ಶುಕ್ರವಾರ ಕಡತ ನೋಡುವೆ’ ಎಂದು ಗೃಹ ಸಚಿವ ಸುಶೀಲಕುಮಾರ್ ಶಿಂಧೆ ಸುದ್ದಿಗಾರರಿಗೆ ತಿಳಿಸಿದರು.
ತೆಲಂಗಾಣ ರಾಜ್ಯ ರಚನೆಯ ಕುರಿತು ಎ.ಕೆ. ಆಂಟನಿ ನೇತೃತ್ವದ ಸಮಿತಿ ವರದಿ ನೀಡಿದೆ. ಸಮಿತಿಯ ಶಿಫಾರಸುಗಳನ್ನು ಸಂಪುಟ ಬಹುತೇಕ ಒಪ್ಪುವ ಸಾಧ್ಯತೆಗಳಿವೆ ಎನ್ನಲಾಗಿದೆ. ‘ರಾಜಕೀಯ ಸಮ್ಮತಿ’ ಪಡೆಯಲು ಶಿಂಧೆ ಈ ಕಡತವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಧಾನಿ ಡಾ, ಮನಮೋಹನ್ ಸಿಂಗ್ ಅವರಿಗೆ ಸಲ್ಲಿಸುವರು ಎನ್ನಲಾಗಿದೆ.