ಹೈದರಾಬಾದ್(ಪಿಟಿಐ): ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯನ್ನು ಒಪ್ಪಲಾಗದು ಎಂದಿರುವ ಆಂಧ್ರಪ್ರದೇಶದ ಸೀಮಾಂಧ್ರ ಮತ್ತು ರಾಯಲಸೀಮೆಯನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಮತ್ತು ಸಂಸದರು, ‘ಪಕ್ಷಕ್ಕಿಂತ ಜನರು, ಜನರ ಭಾವನೆ ಮುಖ್ಯ’ ಎಂದು ಕಾಂಗ್ರೆಸ್ ಹೈಕಮಾಂಡ್ಗೆ ಎಚ್ಚರಿಕೆ ನೀಡಿದ್ದಾರೆ. ಈ ಸಚಿವರು ಮತ್ತು ಸಂಸದರು ಶನಿವಾರ ಇಲ್ಲಿ ಎರಡೂವರೆ ತಾಸುಗಳ ಕಾಲ ಸಭೆ ನಡೆಸಿ, ಆಂಧ್ರ ವಿಭಜನೆ ತೀರ್ಮಾನವನ್ನು ಕೈಬಿಡುವಂತೆ ಒತ್ತಾಯಿಸಲು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಶೀಘ್ರದಲ್ಲಿ ಭೇಟಿ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.
ಜೊತೆಗೆ, ಆಂಧ್ರದಲ್ಲಿ ಭುಗಿಲೆದಿರುವ ವಿರೋಧವನ್ನು ಶಮನ ಮಾಡಲು ಕಾಂಗ್ರೆಸ್ ಹೈಕಮಾಂಡ್ ರಚಿಸಿರುವ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರ ನೇತೃತ್ವದ ನಾಲ್ವರು ಸದಸ್ಯರ ಸಮಿತಿಯನ್ನು ಸೀಮಾಂಧ್ರ ಮತ್ತು ರಾಯಲಸೀಮೆಯ ಭಾಗಗಳಿಗೆ ಭೇಟಿ ನೀಡಿ ಇಲ್ಲಿನ ಪರಿಸ್ಥಿತಿಯನ್ನು ಸ್ವಯಂ ಅವಲೋಕಿಸುವಂತೆ ಮನವಿ ಮಾಡಿಕೊಳ್ಳಲೂ ತೀರ್ಮಾನಿಸಿದೆ.
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜವಳಿ ಸಚಿವ ಕೆ. ಸಾಂಬಶಿವ ರಾವ್, ‘ಪ್ರತ್ಯೇಕ ರಾಜ್ಯ ರಚನೆ ಕುರಿತಂತೆ ಸರ್ಕಾರ ಏನಾದರೂ ಮುಂದಿನ ಹೆಜ್ಜೆ ಇರಿಸಿದರೆ ತಾವು ಯಾವುದೇ ತ್ಯಾಗಕ್ಕೂ ಸಿದ್ಧ’ ಎಂದು ಹೇಳಿದರು. ‘ನಾವು ಪಕ್ಷದ ಶಿಸ್ತಿನ ಸಿಪಾಯಿಗಳು ಎಂದು ಹೈಕಮಾಂಡ್ಗೆ ಮನವರಿಕೆ ಮಾಡಿಕೊಡುವೆವು. ಆದರೆ, ರಾಜ್ಯದ ಜನರ ಭವಿಷ್ಯವನ್ನು ಹಾಳುಮಾಡುವಂತಹ ನಿರ್ಧಾರಕ್ಕೆ ಅವರು ಅಂಟಿಕೊಂಡರೆ ನಾವು ಜನರ ಪರವಾಗಿ ನಿಲ್ಲಲು ಹಿಂಜರಿಯುವುದಿಲ್ಲ. ಈ ವಿಷಯದಲ್ಲಿ ನಮಗೆ ಪಕ್ಷಕ್ಕಿಂತ ಜನರೇ ಮುಖ್ಯ’ ಎಂದರು.
ಸಭೆಯಲ್ಲಿ ಸಚಿವರಾದ ಎಂ.ಎಂ. ಪಲ್ಲಂ ರಾಜು, ಡಿ. ಪುರಂದರೇಶ್ವರಿ, ಕೆ. ಚಿರಂಜೀವಿ, ಜೆ.ಡಿ. ಶೀಲಂ ಮತ್ತು ಕೆ. ಸೂರ್ಯಪ್ರಕಾಶ್ ರೆಡ್ಡಿ ಮತ್ತು ಸೀಮಾಂಧ್ರ ಹಾಗೂ ರಾಯಲಸೀಮೆಯನ್ನು ಪ್ರತಿನಿಧಿಸುವ ಸಂಸದರು ಭಾಗವಹಿಸಿದ್ದರು. ಈ ಮಧ್ಯೆ, ವಿಶಾಲ ಆಂಧ್ರ ಮಹಾಸಭಾ, ಸಮೈಕಾಂಧ್ರ ಸಂಘಟನೆಗಳು ಪ್ರತಿಭಟನೆಯನ್ನು ತೀವ್ರಗೊಳಿಸಿವೆ. ಈ ಸಂಘಟನೆಯ ಕೆಲವು ತಂಡಗಳು ಕೇಂದ್ರದ ಕೆಲವು ಸಚಿವರ ರಾಜೀನಾಮೆಗೆ ಒತ್ತಾಯಿಸಿ ಅವರ ಮನೆಗಳ ಮುಂದೆ ಧರಣಿ ನಡೆಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.