ಹೈದರಾಬಾದ್ (ಪಿಟಿಐ): ಆಂಧ್ರ ಪ್ರದೇಶ ಪುನರ್ರಚನೆ ಕರಡು ಮಸೂ ದೆಯು ಇದೀಗ ತೆಲಂಗಾಣ ಪರ ಹಾಗೂ ವಿರೋಧಿ ಬಣದ ಶಾಸಕರ ಹಗ್ಗ ಜಗ್ಗಾಟಕ್ಕೂ ಅವಕಾಶ ಕಲ್ಪಿಸಿಕೊಟ್ಟಿದೆ.
ಈ ವಿಷಯವಾಗಿ ತೆಲಂಗಾಣ ಹಾಗೂ ಸೀಮಾಂಧ್ರ ಶಾಸಕರು ಕೋಲಾ ಹಲ ಎಬ್ಬಿಸಿದ್ದರಿಂದ ಕರಡು ಮಸೂದೆಯು ವಿಧಾನಸಭೆಯಲ್ಲಿ ಶುಕ್ರವಾರ ಮಂಡನೆಯಾಗಲಿಲ್ಲ. ಸೋಮವಾರ ಮಂಡನೆಯಾಗುವ ನಿರೀಕ್ಷೆ ಇದೆ.
ಕರಡು ಮಸೂದೆ ಮಂಡನೆ ಬಳಿಕ ಸ್ಪೀಕರ್, ಕಲಾಪ ಸಲಹಾ ಸಮಿತಿ ಸಭೆ ಕರೆಯಲಿದ್ದಾರೆ. ಈ ಸಭೆಯಲ್ಲಿ ಕರಡು ಮಸೂದೆ ಮೇಲಿನ ಚರ್ಚೆಯ ದಿನ ಗೊತ್ತುಪಡಿಸಲಾಗುತ್ತದೆ.
ವಿಧಾನಸಭೆಯಲ್ಲಿ ಈ ಕೂಡಲೇ ಕರಡು ಮಸೂದೆ ಮಂಡಿಸಬೇಕು ಎನ್ನುವುದು ತೆಲಂಗಾಣ ಶಾಸಕರ ಪಟ್ಟು. ಇನ್ನೊಂದೆಡೆ ಸೀಮಾಂಧ್ರ ಶಾಸಕರು, ಮುಂದಿನ ತಿಂಗಳು ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಈ ವಿಷಯ ಚರ್ಚೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ. ಚರ್ಚೆಗೆ ಮುನ್ನ ಕರಡು ಮಸೂದೆಯನ್ನು ಇಂಗ್ಲಿಷ್ನಿಂದ ತೆಲುಗು ಹಾಗೂ ಉರ್ದು ಭಾಷೆಗಳಿಗೆ ತರ್ಜುಮೆ ಮಾಡಬೇಕು ಎಂದೂ ಆಗ್ರಹಿಸಿದ್ದಾರೆ.
ಈ ಚಳಿಗಾಲದ ಅಧಿವೇಶನದಲ್ಲಿ ಕರಡು ಮಸೂದೆ ಮೇಲೆ ಚರ್ಚೆ ನಡೆಸುವುದಕ್ಕೆ ಮುಖ್ಯಮಂತ್ರಿ ಕಿರಣ್್ ಕುಮಾರ್್ ರೆಡ್ಡಿ ಹಾಗೂ ಸೀಮಾಂಧ್ರ ಶಾಸಕರಿಗೆ ಮನಸ್ಸಿಲ್ಲ.
ಅವಿಶ್ವಾಸ ಗೊತ್ತುವಳಿ ಬೆದರಿಕೆ:
ಆದರೆ, ತೆಲಂಗಾಣ ಶಾಸಕರು ವಿಳಂಬ ತಂತ್ರಕ್ಕೆ ಅವಕಾಶ ಮಾಡಿ ಕೊಡಲು ತಯಾರಿಲ್ಲ. ತೆಲಂಗಾಣ ರಚನೆಗೆ ಅಡ್ಡಿಯಾಗುತ್ತಿರುವ ಮುಖ್ಯಮಂತ್ರಿ ವಿರುದ್ಧ ‘ಅವಿಶ್ವಾಸ ಗೊತ್ತುವಳಿ’ ಮಂಡಿಸುವುದಾಗಿ ಉಪಮುಖ್ಯಮಂತ್ರಿ ದಾಮೋದರ ರಾಜ ನರಸಿಂಹ ಬೆದರಿಕೆ ಹಾಕಿದ್ದಾರೆ.