ನವದೆಹಲಿ (ಪಿಟಿಐ): ಹತ್ತು ಜಿಲ್ಲೆಗಳನ್ನು ಒಳಗೊಂಡ ಉದ್ದೇಶಿತ ತೆಲಂಗಾಣ ರಾಜ್ಯ ರಚನೆಗೆ ಗುರುವಾರ ರಾತ್ರಿ ನಡೆದ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ರಾಯಲಸೀಮಾ ಪ್ರದೇಶದ ಎರಡು ಜಿಲ್ಲೆಗಳನ್ನು ತೆಲಂಗಾಣ ರಾಜ್ಯಕ್ಕೆ ಸೇರಿಸಬೇಕು ಎಂಬ ವಿವಾದಿತ ಪ್ರಸ್ತಾವನೆಯನ್ನು ಸಂಪುಟ ಕೈಬಿಟ್ಟಿದೆ.
ತೆಲಂಗಾಣಕ್ಕೆ ರಾಯಲಸೀಮಾದ ಎರಡು ಜಿಲ್ಲೆಗಳನ್ನು ಸೇರಿಸಬೇಕು ಎಂಬ ಪ್ರಸ್ತಾವನೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಂಪುಟ ಈ ನಿರ್ಧಾರ ಕೈಗೊಂಡಿದೆ.
ಪ್ರಧಾನಿ ಮನಮೋಹನ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ರಾಜ್ಯ ಪುನರ್ ವಿಂಗಡಣಾ ಮಸೂದೆಗೆ ಒಪ್ಪಿಗೆ ನೀಡಿತು.
ಇದರಿಂದಾಗಿ ದೇಶದ 29ನೇ ಹೊಸ ತೆಲಂಗಾಣ ರಾಜ್ಯ ರಚನೆ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯನ್ನು ಇಟ್ಟಂತಾಗಿದೆ.