ಮಾನ್ವಿ: ರಾಜೋಳ್ಳಿಬಂಡಾ ತಿರುವು ಯೋಜನೆ (ಆರ್ಡಿಎಸ್) ವ್ಯಾಪ್ತಿಯ ತೆಲಂಗಾಣ ಭಾಗದ ರೈತರಿಗೆ ನಿಗದಿತ ನೀರಿನ ಪ್ರಮಾಣದ ವಿತರಣೆಯಲ್ಲಿ ಅನ್ಯಾಯವಾದರೆ ಸಹಿಸುವುದಿಲ್ಲ ಎಂದು ತೆಲಂಗಾಣ ರಾಷ್ಟ್ರೀಯ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಕೆ.ಚಂದ್ರಶೇಖರರಾವ್ ಪುತ್ರಿ ಕವಿತಾ ಹೇಳಿದ್ದಾರೆ.
ರಾಜೋಳ್ಳಿಬಂಡಾ ಅಣೆಕಟ್ಟೆ ಬಳಿ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ಅಣೆಕಟ್ಟೆಯಿಂದ ತೆಲಂಗಾಣ ಭಾಗಕ್ಕೆ ನೀರು ಪೂರೈಕೆಯಲ್ಲಿ ತಾರತಮ್ಯ ಎಸಗಲಾಗುತ್ತಿದೆ. ತೆಲಂಗಾಣ ಭಾಗಕ್ಕೆ ಒಪ್ಪಂದದಂತೆ ಅಗತ್ಯ ನೀರಿನ ಪ್ರಮಾಣ ಪೂರೈಕೆಯಾಗಬೇಕಾದರೆ ಅಣೆಕಟ್ಟೆಯ ಎತ್ತರವನ್ನು ಒಂದು ಮೀಟರ್ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಆಂಧ್ರ, ಕರ್ನಾಟಕ ಸರ್ಕಾರ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಸರ್ಕಾರ ತೆಲಂಗಾಣ ಭಾಗದ ರೈತರ ಹಿತ ಕಾಪಾಡುವಲ್ಲಿ ಯಾವಾಗಲೂ ಸಹಕರಿಸಿದೆ. ಮುಂದೆಯೂ ಸಹಕಾರ ಸಿಗುವ ಸಾಧ್ಯತೆ ಇದೆ.
ಸೋಮವಾರ ತೆಲಂಗಾಣ ಭಾಗದ ಸುಮಾರು 500ಜನ ರೈತರೊಂದಿಗೆ ಆಂಧ್ರಪ್ರದೇಶದ ವಿಧಾನಸೌಧಕ್ಕೆ ತೆರಳಿ ರಾಜೋಳ್ಳಿಬಂಡಾ ಅಣೆಕಟ್ಟೆಯಿಂದ ಅಗತ್ಯ ನೀರು ಪೂರೈಕೆಗೆ ಒತ್ತಾಯಿಸಿ ಧರಣಿ ನಡೆಸುವುದಾಗಿ ಕವಿತಾ ತಿಳಿಸಿದರು.