ಮೆದಕ್ (ಆಂಧ್ರಪ್ರದೇಶ): ಮೆದಕ್ ‘ಹಿರಿಮೆ’ ಪಿರಿದು. ಆದರೆ ಅಭಿವೃದ್ಧಿಯಲ್ಲಿ ಹಿಂದೆ. ದೇಶ ಕಂಡ ಅತ್ಯಂತ ಪ್ರಭಾವಿ ರಾಜಕಾರಣಿ ದಿ. ಇಂದಿರಾ ಗಾಂಧಿ ಅವರು 1980 ರಿಂದ 84ರ ವರೆಗೆ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರೂ ಕೊರತೆಗಳ ‘ಶಾಪ’ ವಿಮೋಚನೆ ಆಗಿಲ್ಲ!
ಹೆಸರಿಗೆ ಜಿಲ್ಲೆ. ಸೌಕರ್ಯಗಳ ವಿಚಾರದಲ್ಲಿ ತಾಲ್ಲೂಕು ಕೇಂದ್ರಕ್ಕೂ ಕಡೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠರ ಕಚೇರಿ ಒಳಗೊಂಡಂತೆ ಎಲ್ಲ ಪ್ರಧಾನ ಕಚೇರಿಗಳು ಇರುವುದು ಸಂಗಾರೆಡ್ಡಿ ಪಟ್ಟಣದಲ್ಲಿ. ಮೆದಕ್ಗೂ ಸಂಗಾರೆಡ್ಡಿಗೂ 60 ಕಿ.ಮೀ. ಅಂತರ. ಜನರಿಗೆ ಅಲೆದಾಟ ತಪ್ಪಿಲ್ಲ. ಇದು ನಿಜಾಮರ ಕಾಲದಲ್ಲಿ ರೂಢಿಗೆ ಬಂದ ವ್ಯವಸ್ಥೆಯಂತೆ. ಇಂದಿಗೂ ಅದೇ ಜಾರಿಯಲ್ಲಿ ಇದೆ. ಆಡಳಿತ ಯಾವ ಪರಿ ಜಡ್ಡುಗಟ್ಟಿದೆ ಎಂಬುದಕ್ಕೆ ಇದಕ್ಕಿಂತ ನಿದರ್ಶನ ಬೇಕೆ?
ಹೈಟೆಕ್ ನಗರ ಹೈದರಾಬಾದ್ಗೆ ಮೆದಕ್ ಬರಿ 100 ಕಿ.ಮೀ. ದೂರದಲ್ಲಿದೆ. ಆದರೆ ಮೆದಕ್ ಪಟ್ಟಣಕ್ಕೆ ಇನ್ನೂ ರೈಲು ಸಂಪರ್ಕ ಇಲ್ಲ. ಮೆದಕ್ಗೆ 10–12 ಕಿ.ಮೀ. ದೂರದಲ್ಲಿರುವ ಅಕ್ಕಣ್ಣಪೇಟವರೆಗೂ ರೈಲು ಮಾರ್ಗ ಇದೆ. ಅದನ್ನು ಮೆದಕ್ವರೆಗೆ ವಿಸ್ತರಿಸಿಲ್ಲ.
ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕೆ.ಚಂದ್ರಶೇಖರ ರಾವ್ ಕಾರ್ಯಕ್ಷೇತ್ರವಾದ ಸಿದ್ಧಿಪೇಟ ಈ ಜಿಲ್ಲೆಯ ವ್ಯಾಪ್ತಿಗೇ ಒಳಪಡುತ್ತದೆ. ಇಂತಹ ಪ್ರಭಾವಿ ನಾಯಕರಿದ್ದೂ ಮೆದಕ್ ‘ಮೆರುಗು’ ಪಡೆದಿಲ್ಲ. ಈಗಿನ ಸಂಸದೆ, ನಟಿ ವಿಜಯಶಾಂತಿ ಆಸಕ್ತಿಯ ಫಲವಾಗಿ, ಮಾರ್ಗ ವಿಸ್ತರಣೆಗೆ ಭೂಸ್ವಾಧೀನ ಪ್ರಕ್ರಿಯೆ ಶುರುವಾಗಿದೆ ಅಂತ ಕ್ಷೇತ್ರದ ಜನ ನೆನೆಯುತ್ತಾರೆ. ಆ ಮಟ್ಟಿಗೆ ಅವರು ಮುಗ್ಧರು.
ಕರ್ನಾಟಕದ ಬಯಲುಸೀಮೆಯ ಬರಪೀಡಿತ ಜಿಲ್ಲೆಗಳ ಜತೆ ಮೆದಕ್ ಸ್ಥಿತಿ ಹೋಲಿಸಬಹುದು. ಬಹುತೇಕ ಕಡೆ ಕೊಳವೆಬಾವಿಗಳೇ ಕೃಷಿಗೆ ಆಧಾರ. ರೈತರನ್ನು ಮಾತಿಗೆ ಎಳೆದರೆ, ನೀರಿನ ಅಭಾವ, ವಿದ್ಯುತ್ ಕೊರತೆ ಬಗ್ಗೆ ಪ್ರಸ್ತಾಪಿಸದೆ ಬಿಡುವುದಿಲ್ಲ.
ಆಗ ಇಂದಿರಾ ಗಾಂಧಿ ಸ್ಪರ್ಧೆಯ ಕಾರಣಕ್ಕಾಗಿ ದೇಶದ ಗಮನ ಸೆಳೆದಿತ್ತು ಮೆದಕ್. ಈಗ ಕೆ.ಸಿ.ಆರ್. ಸ್ಪರ್ಧೆಯಿಂದಾಗಿ ತೀವ್ರ ಕುತೂಹಲ ಕೆರಳಿಸಿದೆ.
ಸಿದ್ಧಿಪೇಟ, ಕರೀಂನಗರ, ಮಹಬೂಬ್ನಗರದಿಂದ ಈ ಹಿಂದೆ ಸ್ಪರ್ಧಿಸಿದ್ದ ಅವರು, ಈ ಸಲ ಮೆದಕ್ಗೆ ಬಂದಿದ್ದಾರೆ. ಮೆದಕ್ ಲೋಕಸಭಾ ಕ್ಷೇತ್ರ ಮಾತ್ರವಲ್ಲದೆ ಈ ಕ್ಷೇತ್ರದ ವ್ಯಾಪ್ತಿಗೇ ಒಳಪಡುವ ಗಜ್ವೇಲ್ ವಿಧಾನಸಭಾ ಕ್ಷೇತ್ರದಿಂದಲೂ ಅವರು ಕಣಕ್ಕೆ ಇಳಿದಿದ್ದಾರೆ.
ಅತ್ತ ಲೋಕಸಭೆ, ಇತ್ತ ಅಸೆಂಬ್ಲಿ ಎರಡೂ ಕಡೆ ಸ್ಪರ್ಧಿಸಿರುವುದರಿಂದ ಕ್ಷೇತ್ರದ ಜನರಲ್ಲಿ ತುಸು ಗೊಂದಲ ಉಂಟಾಗಿದೆ. ಆದರೆ ತೆಲಂಗಾಣ ಪರವಾದ ಅಲೆ, ಟಿಆರ್ಎಸ್ಗೆ ನೂಕುಬಲವಾಗಿ ಪರಿಣಮಿಸಿದೆ.
ಕಳೆದ ಚುನಾವಣೆಯಲ್ಲಿ ಟಿಆರ್ಎಸ್ನಿಂದಲೇ ಸ್ಪರ್ಧಿಸಿ ಗೆದ್ದಿದ್ದ ವಿಜಯಶಾಂತಿ ಪಕ್ಷಾಂತರ ಮಾಡಿದ್ದಾರೆ. ಈ ಸಲ ಮೆದಕ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದಾರೆ. ಪ್ರತಿ ಊರು, ತಾಂಡಾಕ್ಕೂ ತೆರಳಿ ಮತ ಯಾಚಿಸುತ್ತಿದ್ದಾರೆ. ವೃತ್ತಿಯಲ್ಲಿ ವೈದ್ಯರಾದ ಶ್ರವಣಕುಮಾರ್ ರೆಡ್ಡಿ ಅವರನ್ನು ಮೆದಕ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಕಣಕ್ಕೆ ಇಳಿಸಿದೆ. ಸಕ್ರಿಯ ರಾಜಕೀಯಕ್ಕೆ ಇವರು ಹೊಸಬರು. ಟಿಡಿಪಿ ಬೆಂಬಲಿತ ಬಿಜೆಪಿ ಅಭ್ಯರ್ಥಿಯಾಗಿ ಸಿ.ನರೇಂದ್ರನಾಥ್ ಸ್ಪರ್ಧಿಸಿದ್ದಾರೆ. ಇವರು, ‘ನರೇನ್ ಟ್ರಸ್ಟ್’ ಮೂಲಕ ಸೇವಾ ಕಾರ್ಯಗಳನ್ನು ಹಮ್ಮಿಕೊಂಡು ಚಿರಪರಿಚಿತರಾಗಿದ್ದಾರೆ.
ಮೆದಕ್ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸಂಗಾರೆಡ್ಡಿ, ನರಸಾಪುರ, ಗಜ್ವೇಲ್, ಮೆದಕ್, ಸಿದ್ಧಿಪೇಟ, ದುಬ್ಬಾಕ, ಪಟಾನ್ಚೆರು ಈ ಏಳು ವಿಧಾನಸಭಾ ಕ್ಷೇತ್ರಗಳು ಸೇರುತ್ತವೆ. ಗಜ್ವೇಲ್ನಲ್ಲಿ ಕೆ.ಸಿ.ಆರ್. ಅವರಿಗೆ ಟಿಡಿಪಿಯ ಪ್ರತಾಪರೆಡ್ಡಿ ತೀವ್ರ ಸ್ಪರ್ಧೆ ಒಡ್ಡಿದ್ದಾರೆ. ಪ್ರತಾಪರೆಡ್ಡಿ ಕುರಿತು ಜನರಲ್ಲಿ ಸದ್ಭಾವ ಇದೆ. ‘ಕಷ್ಟಕ್ಕೂ ಸುಖಕ್ಕೂ ಸ್ಪಂದಿಸುತ್ತಾರೆ. ಅವರಿಗೇ ನಮ್ಮ ವೋಟು’ ಎಂದರು ವಂಟಿಮಾಮಿಡಿ ಗ್ರಾಮದ ಮುತ್ಯಾಲು. ‘ಕೆ.ಸಿ.ಆರ್. ಅಲ್ಲದೆ ಬೇರೆ ಯಾರೇ ಎದುರಾಳಿ ಆಗಿದ್ದರೂ ರೆಡ್ಡಿ ನಿರಾಯಾಸವಾಗಿ ಗೆದ್ದುಬಿಡುತ್ತಿದ್ದರು’ ಎಂದು ಶಿಂಗಾಯ ಪಲ್ಲಿಯ ಸತ್ಯನಾರಾಯಣ ಅಭಿಪ್ರಾಯಪಟ್ಟರು.
ಜಿಲ್ಲೆಯಲ್ಲಿ ಟಿಡಿಪಿಗೆ ಒಳ್ಳೆಯ ಹಿಡಿತ ಇದೆ. ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸದಿರುವುದು ಆ ಪಕ್ಷಕ್ಕೆ ಹಿನ್ನಡೆ ಆಗಿದೆ. ಬಿಜೆಪಿ ಜತೆಗಿನ ಮೈತ್ರಿಯಿಂದಲೂ ಹೆಚ್ಚಿನ ಪ್ರಯೋಜನ ಆದಂತಿಲ್ಲ. ಮುಂಚೂಣಿ ಮುಖಂಡರನ್ನು ಹಾಗೂ ಕಾರ್ಯಕರ್ತರನ್ನು ಟಿಆರ್ಎಸ್ ತನ್ನ ಕಡೆಗೆ ಸೆಳೆದುಕೊಂಡು ಬಲ ಹೆಚ್ಚಿಸಿಕೊಂಡಿದೆ. ಜಿಲ್ಲೆಯಲ್ಲಿ ಹಿಡಿತ ಸಾಧಿಸುವ ತಂತ್ರಗಾರಿಕೆಯ ಭಾಗವಾಗಿಯೇ ಕೆ.ಸಿ.ಆರ್ ಲೋಕಸಭೆಗೂ ಸ್ಪರ್ಧಿಸಿದ್ದಾರೆ ಎಂಬ ಮಾತಿದೆ.
‘ತೆಲಂಗಾಣ ಕೊಟ್ಟಿದ್ದು ನಾವು’ ಎಂಬ ನಿನಾದದೊಂದಿಗೆ ಕಾಂಗ್ರೆಸ್ ಮುಖಂಡರು ಮತ ಯಾಚಿಸುತ್ತಿದ್ದಾರೆ. ‘ಅದಕ್ಕಾಗಿ ಹೋರಾಡಿದ್ದು ನಾವು’ ಎಂದು ಟಿಆರ್ಎಸ್ ಹೇಳುತ್ತಿದೆ. ಕೆ.ಸಿ.ಆರ್. ನಾಯಕತ್ವ ಸಾಮರ್ಥ್ಯಕ್ಕೆ ಸರಿದೂಗುವಂತಹ ಪ್ರಭಾವಿ ನಾಯಕ ಇಲ್ಲದಿರುವುದು ಕಾಂಗ್ರೆಸ್ಗೆ ತೊಡರುಗಾಲಾಗಿ ಪರಿಣಮಿಸಿದೆ. ಇಷ್ಟಾಗಿಯೂ ಸೋಲು– ಗೆಲುವನ್ನು ತೀರ್ಮಾನಿಸುವುದು ಯುವ ಮತದಾರರು ಎಂಬುದನ್ನು ಎಲ್ಲ ಪಕ್ಷಗಳ ನಾಯಕರೂ ಒಪ್ಪುತ್ತಾರೆ.
ಜೂನ್ 2ಕ್ಕೆ ಉದಯಿಸಲಿರುವ ತೆಲಂಗಾಣ ರಾಜ್ಯದಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶಗಳ ಬಾಗಿಲು ತೆರೆದುಕೊಳ್ಳಲಿದೆ ಎಂಬ ನಿರೀಕ್ಷೆಯಲ್ಲಿರುವ ಯುವ ಪೀಳಿಗೆಯನ್ನು ಯಾವ ಪಕ್ಷ ಹೆಚ್ಚಿನ ಪ್ರಮಾಣದಲ್ಲಿ ಸೆಳೆಯುವುದೋ ಆ ಪಕ್ಷಕ್ಕೆ ಗೆಲುವಿನ ಅವಕಾಶ ಹೆಚ್ಚು ಎಂಬುದು ಕಾರ್ಯಕರ್ತರ ಲೆಕ್ಕಾಚಾರ.
ಜಿಲ್ಲೆಯಲ್ಲಿ ವ್ಯಾಪಕ ಪ್ರಚಾರ ನಡೆಸಿರುವ ಕೆ.ಸಿ.ಆರ್ ಅವರು ಸಿಂಗೂರು ನೀರಿನಿಂದ ಜಿಲ್ಲೆಯ 1.50 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಕರ್ಯ ಕಲ್ಪಿಸುವುದಾಗಿಯೂ, ಮೆದಕ್ ಪಟ್ಟಣವನ್ನು ಪೂರ್ಣ ಪ್ರಮಾಣದಲ್ಲಿ ಜಿಲ್ಲಾ ಕೇಂದ್ರವಾಗಿ ಅಭಿವೃದ್ಧಿಪಡಿಸುವುದಾಗಿಯೂ ಭರವಸೆ ನೀಡಿದ್ದಾರೆ.
ಗೆದ್ದರೆ ಮುಖ್ಯಮಂತ್ರಿಯಾಗುವ ಅವಕಾಶ ಇರುವುದರಿಂದ ಅವರ ಮಾತಿಗೆ ಜನ ಕಿವಿಗೊಡುವ ಸೂಚನೆಗಳು ಕಾಣಿಸುತ್ತಿವೆ. ತೆಲಂಗಾಣ ‘ಸೆಂಟಿಮೆಂಟ್’ ಅಂತರಗಂಗೆಯಂತೆ ಪ್ರವಹಿಸುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.