ಹೈದರಾಬಾದ್ (ಪಿಟಿಐ): ತೆಲುಗು ಚಿತ್ರರಂಗದಲ್ಲಿ ತಮ್ಮ ಹಾಸ್ಯಚಿತ್ರಗಳಿಂದ ಮನೆಮಾತಾಗಿದ್ದ ಖ್ಯಾತ ನಿರ್ದೇಶಕ ಇ.ವಿ.ವಿ.ಸತ್ಯನಾರಾಯಣ (53) ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.
ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು, ಶುಕ್ರವಾರ ಹಠಾತ್ ಹೃದಯಾಘಾತಕ್ಕೆ ಒಳಗಾಗಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಖ್ಯಾತ ನಟ ಅಮಿತಾಭ್ ಬಚ್ಚನ್ ಅಭಿನಯದ ‘ಸೂರ್ಯವಂಶ್’ ಹಿಂದಿ ಚಿತ್ರ ನಿರ್ದೇಶಿಸಿ ಸತ್ಯನಾರಾಯಣ ಪ್ರಖ್ಯಾತಿ ಗಳಿಸಿದ್ದರು. ಎರಡು ದಶಕಗಳ ಕಾಲ ನಿರ್ದೇಶನದಲ್ಲಿ ತೊಡಗಿದ್ದ ಅವರು ಸುಮಾರು 50 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಹಿರಿಯ ನಿರ್ದೇಶಕ ದಿವಂಗತ ಜಂಧ್ಯಾಲ ಅವರ ಸಹಾಯಕರಾಗಿ ಅವರು ಕೆಲಸ ಮಾಡಿದ್ದರು.