ಅಹಮದಾಬಾದ್ (ಪಿಟಿಐ): ಗೋಧ್ರಾ ದುರಂತದ ನಂತರ 2002ರಲ್ಲಿ ಗುಜರಾತ್ನಲ್ಲಿ ನಡೆದ ಕೋಮು ಗಲಭೆಗಳಲ್ಲಿ ನರೇಂದ್ರ ಮೋದಿ ಅವರ ಪಾತ್ರ ಕುರಿತ ಆರೋಪಗಳ ತನಿಖೆಗಾಗಿ ಸುಪ್ರೀಂಕೋರ್ಟ್ ನೇಮಿಸಿದ್ದ ವಿಶೇಷ ತನಿಖಾ ತಂಡ (ಎಸ್ಐಟಿ) ಸಲ್ಲಿಸಿರುವ ಗೋಪ್ಯ ವರದಿಯಲ್ಲಿಯ ವಿವರಗಳನ್ನು ತೆಹೆಲ್ಕಾ ನಿಯತಕಾಲಿಕಬಹಿರಂಗಪಡಿಸಿದೆ.
ಗುಲ್ಬರ್ಗ ಸಂಘ, ನರೋಡಾ ಪಾಟಿಯಾ ಮತ್ತು ಇತರ ಪ್ರದೇಶಗಳಿಗೆ ಮೋದಿ ಅವರು ಭೇಟಿ ನೀಡಿದ್ದಾಗ ‘ಪ್ರತಿಯೊಂದು ಕ್ರಿಯೆಗೂ ಸಮಾನವಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇದ್ದೇ ಇರುತ್ತದೆ’ ಎಂದು ಹೇಳುವ ಮೂಲಕ ಗಂಭೀರವಾದ ಪ್ರಕರಣವನ್ನು ದುರ್ಬಲಗೊಳಿಸಲು ಯತ್ನಿಸಿದ್ದರು ಎಂದು ವರದಿ ಹೇಳಿರುವುದಾಗಿ ತೆಹೆಲ್ಕಾ ಬಿಡುಗಡೆ ಮಾಡಿರುವ ತ್ರಿಕಾ ಹೇಳಿಕೆ ತಿಳಿಸಿದೆ.
ಸಚಿವರಾಗಿದ್ದ ಅಶೋಕ್ ಭಟ್ ಮತ್ತು ಐ.ಕೆ.ಜಡೇಜಾ ಅವರನ್ನು ಕ್ರಮವಾಗಿ ಅಹಮದಾಬಾದ್ ಹಾಗೂ ಗುಜರಾತ್ ಪೊಲೀಸ್ ನಿಯಂತ್ರಣ ಕಚೇರಿಯಲ್ಲಿ ನಿಯೋಜಿಸಿ ಗಲಭೆ ನಿಯಂತ್ರಣಕ್ಕೆ ಬಾರದಂತೆ ನೋಡಿಕೊಂಡಿದ್ದರು. ಅಲ್ಲದೆ, ರಾಜಕೀಯ ನಿಷ್ಠೆಯನ್ನು ಆಧರಿಸಿ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಲಾಗಿದೆ ಎಂದು ಎಸ್ಐಟಿ ವರದಿ ತಿಳಿಸಿರುವುದಾಗಿ ಹೇಳಿಕೆ ವಿವರಿಸಿದೆ.
ಬರೀ ಆಪಾದನೆ
ತೆಹೆಲ್ಕಾ ಬಿಡುಗಡೆ ಮಾಡಿರುವ ವಿಚಾರಗಳು ಎಸ್ಐಟಿ ತನಿಖಾ ವರದಿಯಾಗಿರದೆ ಬರೀ ಆಪಾದನೆಗಳಾಗಿವೆ ಎಂದು ಬಿಜೆಪಿ ವಕ್ತಾರೆ ನಿರ್ಮಲಾ ಸೀತಾರಾಂ ಹೇಳಿದ್ದಾರೆ. ಮೋದಿ ಅವರಿಗೆ ಸಂಪೂರ್ಣ ನ್ಯಾಯ ದೊರಕುತ್ತದೆಂದು ಪಕ್ಷ ಭಾವಿಸಿದೆ ಎಂದು ತಿಳಿಸಿದ್ದಾರೆ.