ಚಿತ್ರದುರ್ಗ: ‘ಪ್ರಸ್ತುತ ದಿನಗಳಲ್ಲಿ ನೈಸರ್ಗಿಕವಾಗಿ ಸಿಗುತ್ತಿರುವ ಇಂಧನ ಮುಗಿಯುತ್ತಾ ಬಂದಿದ್ದು, ಒಂದು ವೇಳೆ ನಾವು ಈ ವಿಚಾರವಾಗಿ ನಿರ್ಲಕ್ಷಿಸಿದರೆ ಜಾಗತಿಕ ಮಟ್ಟದಲ್ಲಿ ತೈಲಕ್ಕಾಗಿ ಮೂರನೇ ಮಹಾಯುದ್ಧವಾದರೂ ಅಚ್ಚರಿ ಪಡಬೇಕಿಲ್ಲ’ ಎಂದು ಎಸ್ಜೆಎಂ ತಾಂತ್ರಿಕ ಮಹಾವಿದ್ಯಾಲಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ.ಶ್ರೀಧರ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಜಿಲ್ಲಾ ಜೈವಿಕ ಇಂಧನ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ, ಎಸ್ಜೆಎಂ ತಾಂತ್ರಿಕ ಮಹಾವಿದ್ಯಾಲಯ ಮೆಕ್ಯಾನಿಕಲ್ ವಿಭಾಗದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಜೈವಿಕ ಇಂಧನ ಜಾಗೃತಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಮುಂದಿನ ದಿನಗಳಲ್ಲಿ ತೈಲದ ಕೊರತೆ ಉಂಟಾಗದಂತೆ ಎಚ್ಚರಿಕೆಯ ಗಂಟೆಯಾಗಿ ಜೈವಿಕ ಇಂಧನದ ಅವಶ್ಯಕತೆ
ಹೆಚ್ಚಾಗಿದೆ. ಆದ್ದರಿಂದ ಜೈವಿಕ ಇಂಧನ ಸಸ್ಯಗಳನ್ನು ಬೆಳೆಸಿ ಪೋಷಿಸುವ ಕಾರ್ಯಕ್ಕೆ ನಾವೆಲ್ಲರೂ ಮುಂದಾಗಬೇಕು’ ಎಂದು ಕರೆ ನೀಡಿದರು.
ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವೈಜ್ಞಾನಿಕ ಸಹಾಯಕ ಬಿ.ಕೆ.ಸುನೀಲ್ಕುಮಾರ್ ಜೈವಿಕ ಇಂಧನದ ಪರಿಚಯ, ಮಾಹಿತಿ ಹಾಗೂ ಉಪಯೋಗಗಳ ಬಗ್ಗೆ ಪರಿಕರಗಳ ಮಾದರಿಗಳ ಸಮೇತ ವಿವರಿಸಿದರು.
ನಂತರ ಮಾತನಾಡಿದ ಅವರು, ‘ನಿಮ್ಮ ಶಾಲೆಯಲ್ಲಿಯೇ ಬೀಜ ಖರೀದಿ ಕೇಂದ್ರ ಪ್ರಾರಂಭಿಸಲಾಗಿದ್ದು, ನಿಮ್ಮ ರಜಾ ದಿನಗಳಲ್ಲಿ ಬೇವಿನ ಬೀಜ, ಹೊಂಗೆ ಬೀಜಗಳನ್ನು ಸಂಗ್ರಹಿಸಿ ನಿಮ್ಮ ಶಾಲೆಗೆ ಕೊಟ್ಟರೆ ಅದಕ್ಕೆ ತಕ್ಕ ಬೆಲೆ ಪಡೆದುಕೊಂಡು ಆರ್ಥಿಕ ಸುಧಾರಣೆಗೆ ಮುಂದಾಗುವುದರ ಜತೆಗೆ ಜೈವಿಕ ಇಂಧನ ಉತ್ಪಾದಿಸಲು ಸಹಕರಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅದೇ ವಿಭಾಗದ ವೈಜ್ಞಾನಿಕ ಸಹಾಯಕ ಎ.ಬಿ. ಕಲ್ಲೇಶ್ ಮಾತನಾಡಿ, ಸರ್ಕಾರದಿಂದ ಸಿಗುವ ವಿವಿಧ ಯೋಜನೆಗಳಾದ ಸುವರ್ಣಭೂಮಿ, ಬರಡು ಬಂಗಾರ, ಹಸಿರುಹೊನ್ನು ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮಾಹಿತಿ ನೀಡಿದರು.
ಶಾಲೆಯ ಮುಖ್ಯ ಶಿಕ್ಷಕ ಎಚ್. ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಎ.ಬಿ.ಕಲ್ಲೇಶ್ ಹಾಜರಿದ್ದರು. ಗುರುಮೂರ್ತಿ ಸ್ವಾಗತಿಸಿದರು.
ಸುಮಾ ವಂದಿಸಿದರು. ನಂತರ ಸಾಂಕೇತಿಕವಾಗಿ ಜೈವಿಕ ಇಂಧನ ಸಸಿ ನೆಡುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.