ರಾಣೆಬೆನ್ನೂರು: ಸಕಾಲಕ್ಕೆ ಮುಂಗಾರು ಮಳೆಯಾಗದೇ ತೊಗರಿ ಬೆಳೆಯಲು ರೈತರು ತೀವ್ರ ಸಂಕಷ್ಟ ಎದುರಿಸಬೇಕಾಗಿದ್ದು, ಇದನ್ನು ತಪ್ಪಿಸಲು ನಾಟಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕೆಂದು ಕೃಷಿ ವಿಜ್ಞಾನ ಕೇಂದ್ರದ ತಳಿ ಅಭಿವೃದ್ಧಿ ವಿಜ್ಞಾನಿ ಡಾ.ಕಾವೇರಾ ಬಿರಾದಾರ ರೈತರಿಗೆ ತಿಳಿಸಿದರು.
ತಾಲ್ಲೂಕಿನ ಜೋಯಿಸರಹರಳ್ಳಿಯ ಸಂಗಪ್ಪ ಗೂಳಪ್ಪ ಬಣಕಾರ ಅವರ ಜಮೀನಿನಲ್ಲಿ ಏರ್ಪಡಿಸಿದ (ನಾಟಿ ಪದ್ಧತಿ) ಬಿಎಸ್ಎಂಆರ್–736 ತೊಗರಿ ಬೆಳೆಯ ಪ್ರಾತ್ಯಕ್ಷಿಯೆಲ್ಲಿ ಮಾತನಾಡಿದರು. ರೈತ ಸಂಗಪ್ಪ ಬಣಕಾರ ಮಾತನಾಡಿ, ಒಂದು ಎಕರೆಗೆ 3.5 ಸಾವಿರ ಸಸಿಗಳನ್ನು ಗುಣಿ ತೋಡಿ ನಾಟಿ ಮಾಡಿದ್ದು, ಎರಡು ಬಾರಿ ಸಸಿ ಚಿವುಟಿ ಕಸಿ ಮಾಡಲಾಗಿದೆ, ಒಂದು ಗಿಡದಲ್ಲಿ 800 ಗ್ರಾಂ ವರೆಗೆ ತೊಗರಿ ಕಾಳು ಬರಲಿದೆ, ತೊಗರಿಯನ್ನು ಲಾಭದಾಯಕವಾಗಿ ಬೆಳೆಯಬಹುದು ಎಂದು ಹರ್ಷ ವ್ಯಕ್ತಪಡಿಸಿದರು.
ಮಣ್ಣು ವಿಜ್ಞಾನಿ ಡಾ.ಜಿ.ಆರ್. ರಾಜಕುಮಾರ ಅವರು ಮಣ್ಣಿನ ಗುಣ ಲಕ್ಷಣಗಳ ಬಗ್ಗೆ ಮತ್ತು ಪಶು ಸಂಗೋಪನಾ ವಿಜ್ಞಾನಿ ಡಾ.ಎಸ್.ವೈ. ಮುಕರ್ತಾಳ ದ್ವಿದಳ ಮೇವಿನ ಉಪಯುಕ್ತತೆ ದ್ವಿದಳ ಮಿಶ್ರಣ ಆಹಾರದವನ್ನು ಜಾನುವಾರುಗಳಿಗೆ ಕೊಡುವ ಬಗ್ಗೆ ಸಮಗ್ರವಾದ ವಿವರಣೆ ನೀಡಿದರು. ಕೃಷಿ ವಿಜ್ಞಾನ ಕೇಂದ್ರದಮುಖ್ಯಸ್ಥ ಮಲ್ಲಿಕಾರ್ಜುನಪ್ಪ ಗೌಡರ ಸೇರಿದಂತೆ ಜೋಯಿಸರಹರಳಳ್ಳಿ ಗ್ರಾಮದ ಸುತ್ತಮುತ್ತಲಿನ ಗ್ರಾಮದ ರೈತರು ಮತ್ತು ವಿವಿಧ ಬೆಳೆಗಳಿಗೆ ಸಂಬಂಧಿಸಿದ ತಜ್ಞರು ಕ್ಷೇತ್ರೋತ್ಸವದಲ್ಲಿ ಭಾಗವಹಿಸಿದ್ದರು.