ಗದಗ: ತೋಳ ಕಚ್ಚಿ ಐವರು ತೀವ್ರವಾಗಿ ಗಾಯಗೊಂಡ ಘಟನೆ ಇಲ್ಲಿಗೆ ಸಮೀಪದ ಹಾತಲಗೇರಿಯಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ.
ರಾಮಣ್ಣ ಹೊಂಬಾಳ, ಹನುಮಪ್ಪ ಅಬ್ಬಿಗೇರಿ, ಶಿವಮ್ಮ ಡೊಳ್ಳಿನ, ಕರಿಯಪ್ಪ ಗದಗ, ಮಂಜಪ್ಪ ಮುರ್ಲಾಪೂರ ಗಾಯಗೊಂಡಿದ್ದಾರೆ. ಇವರಲ್ಲಿ ಹನುಮಪ್ಪ ಹಾಗೂ ಶಿವಮ್ಮ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಉಳಿದ ಮೂವರು ಗದಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಊರ ಸಮೀಪದ ಜಮೀನಿನ ಕಣದಲ್ಲಿ ಇದ್ದ ಜೋಳದ ರಾಶಿಯನ್ನು ನೋಡಿ ಕೊಳ್ಳಲು ಮಲಗಿದ್ದ ನಾಲ್ವರು ಪುರುಷರನ್ನು ನಸುಕಿನ ಜಾವ ತೋಳ ಕಚ್ಚಿ ಗಾಯಗೊಳಿಸಿದೆ. ಅಲ್ಲದೆ ಜಮೀನಿನ ಹತ್ತಿರದಲ್ಲಿಯೇ ಇದ್ದ ಮನೆಯ ಜಗುಲಿ ಮೇಲೆ ಮಲಗಿದ್ದ ಶಿವಮ್ಮ ಡೊಳ್ಳಿನ ಅವರನ್ನು ಸಹ ತೋಳ ಕಡಿದು ಗಾಯಗೊಳಿಸಿದೆ ಎನ್ನಲಾಗಿದೆ.