ಮುಂಬೈ (ಐಎಎನ್ಎಸ್): ಮಹಾರಾಷ್ಟ್ರ ನವನಿರ್ಮಾಣ ಸೇನಾವನ್ನು ಒಳಪಡಿಸಿ ‘ತ್ರಿಪಕ್ಷೀಯ ರಂಗ’ವೊಂದನ್ನು ರಚಿಸಬೇಕೆಂಬ ಬಿಜೆಪಿ ನಾಯಕ ಗೋಪಿನಾಥ ಮುಂಡೆ ಅವರ ಸಲಹೆಯನ್ನು ಶಿವಸೇನಾ ಮುಖ್ಯಸ್ಥ ಬಾಳ್ ಠಾಕ್ರೆ ಸಾರಾಸಗಟು ತಿರಸ್ಕರಿಸಿದ್ದಾರೆ.
ಮಂಗಳವಾರ ಪಕ್ಷದ ಮುಖವಾಣಿ ‘ಸಾಮ್ನಾ’ದಲ್ಲಿ ಸಂಪಾದಕೀಯ ಬರೆದಿರುವ ಠಾಕ್ರೆ, ‘ರಾಜ್ಯದಲ್ಲಿ 22 ವರ್ಷಗಳಿಂದ ‘ರಾಮ ಬಾಮ್’ ಆಗಿರುವ ಶಿವಸೇನಾ-ಬಿಜೆಪಿ ಮೈತ್ರಿಯು ತೃಪ್ತಿಕರವಾಗಿದ್ದು, ಇಲ್ಲಿ ತೃತೀಯ ‘ಜಂಡೂ ಬಾಮ್’ನ ಪ್ರಶ್ನೆಯೇ ಇಲ್ಲ’ ಎಂದಿದ್ದಾರೆ.
ಬಿಜೆಪಿ-ಶಿವಸೇನಾ ಮೈತ್ರಿಕೂಟಕ್ಕೆ ರಾಜ್ ಠಾಕ್ರೆಯವರ ಎಂಎನ್ಎಸ್ (ಮಹಾರಾಷ್ಟ್ರ ನವ ನಿರ್ಮಾಣ ಸೇನೆ) ಸೇರಿಕೊಳ್ಳಬೇಕೆಂದು ಲೋಕಸಭೆಯಲ್ಲಿನ ಬಿಜೆಪಿ ಉಪ ನಾಯಕ ಮುಂಡೆ ಸೋಮವಾರ ಸಲಹೆ ನೀಡಿದ್ದರು. ಮೊದಲಿಗೆ, ಇತ್ತೀಚೆಗೆ ಔರಂಗಾ ಬಾದ್ನಲ್ಲಿ ನಡೆದ ಬಿಜೆಪಿ ರಾಜ್ಯಕಾರ್ಯಕಾರಿ ಸಭೆಯಲ್ಲೂ ಮುಂಡೆ ಇದೇ ಸಲಹೆ ನೀಡಿದ್ದು, ಆದರೆ ಇದನ್ನು ಶಿವಸೇನಾ ಕಾರ್ಯನಿರ್ವಾಹಕ ಅಧ್ಯಕ್ಷ ಉದ್ಧವ್ ಠಾಕ್ರೆ ತಳ್ಳಿಹಾಕಿದ್ದರು.
ಇದಾದ ಒಂದು ವಾರ ಬಳಿಕ, ಕೆಲವು ಪತ್ರಕರ್ತರೊಂದಿಗೆ ಅನೌಪಚಾರಿಕವಾಗಿ ಮಾತನಾಡಿದ ಮುಂಡೆ, ತಮ್ಮ ಸಲಹೆಯನ್ನು ಶಿವಸೇನೆ ಮತ್ತು ಎಂಎನ್ಎಸ್ ಬಲವಾಗಿ ನಿರಾಕರಿಸಿಲ್ಲ ಎಂದಿದ್ದರು.
ಎರಡೂ ಪಕ್ಷಗಳ ಸಾಮಾನ್ಯ ಕಾರ್ಯಕರ್ತರು ಇಂತಹ ಮೈತ್ರಿ ಬಯಸಿದ್ದು, ಇದರಿಂದ ರಾಜ್ಯದಲ್ಲಿ ಈ ಮೂರು ವಿರೋಧ ಪಕ್ಷಗಳು ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂಬರ್ಥದಲ್ಲಿ ಅವರು ಈ ಸಲಹೆ ನೀಡಿದ್ದರು.