ಬ್ಯಾಂಕಾಕ್ (ಎಎಫ್ಪಿ): ಥಾಯ್ಲೆಂಡ್ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಸೋಮವಾರ ಭದ್ರತಾ ಸಿಬ್ಬಂದಿ ಮತ್ತು ಪ್ರತಿಭಟನಾಕಾರರ ಮಧ್ಯೆ ಮತ್ತೆ ಘರ್ಷಣೆ ನಡೆದಿದ್ದು, ಯಾವುದೇ ಸಾವು– ನೋವಿನ ವರದಿಯಾಗಿಲ್ಲ.
ಭಾನುವಾರ ಹಿಂಸಾರೂಪಕ್ಕೆ ತಿರುಗಿದ ಪ್ರತಿಭಟನೆಯಲ್ಲಿ ಐವರು ಮೃತಪಟ್ಟ ಬೆನ್ನಲ್ಲೇ, ರಾಜಧಾನಿಯಾದ್ಯಂತ ಸರ್ಕಾರಿ ವಿರೋಧಿ ಪ್ರತಿಭಟನೆಯ ಕಾವು ಮತ್ತಷ್ಟು ಹೆಚ್ಚಾಗಿದೆ. ಭಾರಿ ಬಿಗಿ ಭದ್ರತೆ ಒದಗಿಸಲಾಗಿದ್ದ ಸರ್ಕಾರದ ಕೇಂದ್ರ ಕಚೇರಿ ಪ್ರವೇಶಿಸಲು ಯತ್ನಿಸಿದ ಸಾವಿರಾರು ಪ್ರತಿಭಟನಾಕಾರರು, ಕಾವಲು ಕಾಯುತ್ತಿದ್ದ ಪೊಲೀಸರತ್ತ ಕಲ್ಲು ಮತ್ತು ದೊಣ್ಣೆಗಳನ್ನು ಎಸೆದಿದ್ದರಿಂದ ಸ್ಥಳದಲ್ಲಿ ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಗಿತ್ತು.
ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರೂ ಜಗ್ಗದಿದ್ದಾಗ, ಅಂತಿಮವಾಗಿ ಜಲಫಿರಂಗಿ ಪ್ರಯೋಗಿಸಲಾಯಿತು.
2 ದಿನ ಗಡುವು: ಪ್ರತಿಭಟನೆಯ ನೇತೃತ್ವ ವಹಿಸಿರುವ ಪ್ರಮುಖ ವಿರೋಧ ಪಕ್ಷವಾದ ‘ಡೆಮಾಕ್ರಟಿಕ್ ಪಕ್ಷ’ದ ನಾಯಕ ಸುಥೇಪ್್ ತಾಗ್ಸುಬಾನ್, ಪ್ರಧಾನಿ ಯಿಂಗ್ಲುಕ್ ಶಿನವತ್ರಾ ಜತೆ ಭಾನುವಾರ ರಹಸ್ಯ ಮಾತುಕತೆ ನಡೆಸಿದ್ದಾರೆ.
ರಕ್ಷಣಾ ಪಡೆಯ ಮೂವರು ಮುಖ್ಯಸ್ಥರ (ಭೂಸೇನೆ, ವಾಯುಸೇನೆ ಹಾಗೂ ನೌಕಾಸೇನೆ) ಸಮ್ಮುಖದಲ್ಲಿ ಮಾತುಕತೆ ನಡೆದಿದ್ದು, ಈ ವೇಳೆ ಪ್ರತಿಭಟನಾಕಾರರ ಬೇಡಿಕೆಯನ್ನು ಮುಂದಿಟ್ಟಿರುವ ತಾಗ್ಸುಬಾನ್, ಜನರಿಗೆ ಅಧಿಕಾರ ಹಸ್ತಾಂತರಿಸಬೇಕು. ಈ ವಿಷಯದಲ್ಲಿ ಯಾವುದೇ ರೀತಿಯ ಚೌಕಾಸಿಯಿಲ್ಲ. ಅಲ್ಲದೆ, ಈ ಪ್ರಕ್ರಿಯೆ ಎರಡು ದಿನಗಳೊಳಗೆ ಪೂರ್ಣಗೊಳ್ಳಬೇಕು ಎಂದು ಗಡುವು ನೀಡಿದ್ದಾರೆ ಎನ್ನಲಾಗಿದೆ.
ಆಡಳಿತದಲ್ಲಿ ಪ್ರಧಾನಿ ಯಿಂಗ್ಲುಕ್ ಶಿನವತ್ರಾ ಅವರ ಸಹೋದರ ತಕ್ಸಿನ್ ಶಿನವತ್ರಾ ಹಸ್ತಕ್ಷೇಪ ಹೆಚ್ಚಾಗಿದ್ದು, ಸರ್ಕಾರವನ್ನು ಅವರೇ ನಿಯಂತ್ರಿಸುತ್ತಿದ್ದಾರೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು, ಕೂಡಲೇ ಯಿಂಗ್ಲುಕ್ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ
ನೀಡಿ, ‘ಪೀಪಲ್ಸ್ ಕೌನ್ಸಿಲ್’ಗೆ ಅಧಿಕಾರ ಹಸ್ತಾಂತರಿಸಬೇಕು ಎಂದು ಆಗ್ರಹಿಸಿದ್ದಾರೆ.