ಬ್ಯಾಂಕಾಕ್ (ಪಿಟಿಐ): ಸಾವಿರಾರು ಪ್ರತಿಭಟನಾಕಾರರು ಭಾನುವಾರ ಪ್ರಧಾನಿ ಯಿಂಗ್ಲುಕ್ ಶಿನವಾತ್ರ ನೇತೃತ್ವದ ಉಸ್ತುವಾರಿ ಸರ್ಕಾರದ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಜತೆಗೆ, ಪ್ರಮುಖ ವಿರೋಧ ಪಕ್ಷವು ಫೆ.2ರಂದು ನಡೆಯಲಿರುವ ಕ್ಷಿಪ್ರ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಹೇಳಿದೆ.
ಸಂವಿಧಾನ ಸುಧಾರಣೆಗಾಗಿ ಮಾರ್ಗದರ್ಶಿ ಸೂತ್ರಗಳನ್ನು ಪ್ರಸ್ತಾಪಿಸಿರುವ ಶಿನವಾತ್ರ ಅವರು, ಚುನಾವಣೆಯ ನಂತರ ಈ ಸುಧಾರಣೆಯನ್ನು ಎಲ್ಲಾ ರಾಜಕೀಯ ಪಕ್ಷಗಳು ಗೌರವಿಸಬೇಕು ಎಂದು ಕೋರಿದ್ದಾರೆ.
ಈ ಮಧ್ಯೆ, ಪ್ರತಿಭಟನೆಯ ನೇತೃತ್ವ ವಹಿಸಿರುವ ಮಾಜಿ ಉಪಪ್ರಧಾನಿ ಸುಥೆಪ್ ತಾಗ್ಸುಬಾನ್ ಅವರು ಪ್ರತಿಭಟನಾ ರ್್ಯಾಲಿಯು ಶಿನವಾತ್ರ ಅವರ ಸರ್ಕಾರದ ಮೇಲೆ ಖಂಡಿತ ಒತ್ತಡ ಹೇರಲಿದೆ ಎಂದಿದ್ದಾರೆ.
ಫೆ.2ರಂದು ನಡೆಯಲಿರುವ ಚುನಾವಣೆಗೆ ಬ್ಯಾಂಕಾಕ್ನ ಕ್ರೀಡಾಂಗಣದಲ್ಲಿ ಸೋಮವಾರ (ಡಿ.23) ಅಭ್ಯರ್ಥಿಗಳ ಹೆಸರು ನೋಂದಣಿ ನಡೆಯಲಿದ್ದು, ಈ ಸಂದರ್ಭದಲ್ಲೇ ಕ್ರೀಡಾಂಗಣಕ್ಕೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.