ಬ್ಯಾಂಕಾಕ್ (ಪಿಟಿಐ): ಸರ್ಕಾರದ ವಿರು-ದ್ಧದ ಬಂಡಾಯಕ್ಕೆ ಮಣಿದಿರುವ ಥಾಯ್ಲೆಂಡ್ ಪ್ರಧಾನಿ ಯಿಂಗ್ಲಕ್ ಶಿನವತ್ರಾ ಸೋಮವಾರ ನಿರೀಕ್ಷೆಯಂತೆ ಸಂಸತ್ ವಿಸರ್ಜಿಸಿದ್ದಾರೆ.
ದೇಶದ ರಾಜಕೀಯ ಅಸ್ಥಿರತೆ ಕೊನೆಗಾಣಿಸಲು ಈ ನಿರ್ಧಾರ ಕೈಗೊಂಡಿರುವುದಾಗಿ ರಾಷ್ಟ್ರದ ಜನರನ್ನು ಉದ್ದೇಶಿಸಿ ಟ.ವಿ. ಯಲ್ಲಿ ಮಾಡಿದ ಭಾಷಣದಲ್ಲಿ ಅವರು ಹೇಳಿದ್ದಾರೆ.
ಫೆಬ್ರುವರಿ 2ರ ಒಳಗಾಗಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೊಸ ಚುನಾವಣೆ ನಡೆಯಲಿವೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವರೆಗೂ ಮಧ್ಯಂತರ ಸರ್ಕಾರದ ಹಂಗಾಮಿ ಪ್ರಧಾನಿಯಾಗಿ ಅಧಿಕಾರದಲ್ಲಿ ಮುಂದುವರಿಯುವುದಾಗಿಯೂ ಅವರು ಸ್ಪಷ್ಟಪಡಿಸಿದ್ದಾರೆ.
ಸರ್ಕಾರ ವಿರೋಧಿ ದಂಗೆ ತೀವ್ರಗೊಳ್ಳುತ್ತಲೇ ಭಾರಿ ಒತ್ತಡಕ್ಕೆ ಒಳಗಾಗಿದ್ದ ಶಿನವತ್ರಾ ಸಂಸತ್ ವಿಸರ್ಜಿಸುವ ಸುಳಿವು ನೀಡಿದ್ದರು.
ಶಿನವತ್ರಾ ಪ್ರಸ್ತಾವನೆ ತಳ್ಳಿಹಾಕಿರುವ ಪ್ರತಿಭಟನಾಕಾರರು, ಸಂಸತ್ ವಿಸರ್ಜನೆಯಾದ ನಂತರ ಅವರು ಅಧಿಕಾರದಲ್ಲಿ ಮುಂದುವರಿಯುವುದರಲ್ಲಿ ಅರ್ಥವಿಲ್ಲ. ಹೀಗಾಗಿ ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಜಾರಿಗೊಳಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಮಂಡಳಿ (ಪೀಪಲ್ಸ್ ಕೌನ್ಸಿಲ್) ಆಡಳಿತ ವ್ಯವಸ್ಥೆ ಜಾರಿಗೆ ತರುವಂತೆ ಸಾವಿರಾರು ಜನರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.
ಆಡಳಿತ ವಿರೋಧಿ ಪ್ರತಿಭಟನಾಕಾರರನ್ನು ಒಳಗೊಂಡ ಸುಥೆಪ್ ತೌಗ್ಸುಬಾನ್ ನೇತೃತ್ವದ ‘ಪ್ರಜಾಸತ್ತಾತ್ಮಕ ಸುಧಾರಣಾ ಸಮಿತಿ’ಗೆ ಈ ಜನಪ್ರತಿನಿಧಿಗಳ ಮಂಡಳಿಯ ಚುಕ್ಕಾಣಿ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಡಲಾಗಿದೆ.
ಶಿನವತ್ರಾ ಆಡಳಿತ ಕೊನೆಗಾಣಿಸಲು ಸೋಮವಾರ ಅಂತಿಮ ಹೋರಾಟಕ್ಕೆ ತೌಗ್ಸುಬಾನ್ ಕರೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದಲೇ ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಸರ್ಕಾರಿ ಭವನಕ್ಕೆ ಮುತ್ತಿಗೆ ಹಾಕಿದರು.
2011ರಲ್ಲಿ ಅಧಿಕಾರಕ್ಕೆ ಬಂದ 46 ವರ್ಷದ ಪ್ರಧಾನಿ ಯಿಂಗ್ಲಕ್ ಶಿನವತ್ರಾ ಅವರು ತಮ್ಮ ಸಹೋದರ ಹಾಗೂ ಗಡೀಪಾರಾಗಿರುವ ಈ ಹಿಂದಿನ ಪ್ರಧಾನಿ ಥಕ್ಸಿನ್ ಶಿನವತ್ರಾ ಆಣತಿಯಂತೆ ಆಡಳಿತ ನಡೆಸುತ್ತಿದ್ದಾರೆ ಎನ್ನುವುದು ಪ್ರತಿಭಟನೆಯ ನೇತೃತ್ವ ವಹಿಸಿರುವ ಸಟಿಟ್ ವಾಂಗ್ನೊಟ್ಯಾಗಿ ಅವರ ಆರೋಪ.