ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ.ಕ. ಹಾಲು ಉತ್ಪಾದಕರ ಒಕ್ಕೂಟ ನಿರ್ಧಾರ. ಕರಾವಳಿ: ಪನೀರ್ ತಯಾರಿ ಘಟಕ ಸ್ಥಾಪನೆ.

Last Updated 18 ಫೆಬ್ರುವರಿ 2011, 10:05 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿಯಲ್ಲಿ ಹೆಚ್ಚಿನ ಬೇಡಿಕೆ ಇರುವ ಹಾಲು ಉತ್ಪನ್ನವಾದ ಪನೀರ್ ತಯಾರಿಸಲು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ ತೀರ್ಮಾನಿಸಿದೆ.
‘ಕರಾವಳಿ ಭಾಗದಲ್ಲಿ ತಿಂಗಳಿಗೆ 3 ಟನ್ ಪನೀರ್‌ಗೆ ಬೇಡಿಕೆ ಇದ್ದು, ಹೊರ ಜಿಲ್ಲೆಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಇಲ್ಲಿಯೇ ಪನೀರ್ ಉತ್ಪಾದಿಸಿದರೆ ಹೆಚ್ಚಿನ ಲಾಭ ಗಳಿಸುವ ನಿರೀಕ್ಷೆ ಇದೆ’ ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ‘ಪ್ರಜಾವಾಣಿ’ಗೆ ಗುರುವಾರ ತಿಳಿಸಿದರು.

ಶೀಘ್ರ ಆರಂಭ: ‘ಪನೀರ್ ತಯಾರಿ ಆರಂಭಿಸಲು ನೂತನ ಘಟಕ ಸ್ಥಾಪಿಸಬೇಕಾಗುತ್ತದೆ. ಈ ಬಗ್ಗೆ ಪ್ರಕ್ರಿಯೆ ಆರಂಭಗೊಂಡಿದ್ದು, ಒಂದೆರಡು ತಿಂಗಳಲ್ಲೇ ಕುಲಶೇಖರದಲ್ಲಿ ಪನೀರ್ ಉತ್ಪಾದನಾ ಘಟಕ ಆರಂಭಿಸುವ ಉದ್ದೇಶವಿದೆ’ ಎಂದು ಅವರು ತಿಳಿಸಿದರು.3.30 ಲಕ್ಷ ಲೀ. ಬೇಡಿಕೆ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿತ್ಯ 3.30 ಲಕ್ಷ ಲೀ. ಹಾಲಿಗೆ ಬೇಡಿಕೆ ಇದೆ. ಆದರೆ, ಸ್ಥಳೀಯವಾಗಿ ನಾವು ಸಂಗ್ರಹಿಸುವುದು 1.6 ಲಕ್ಷ ಲೀ. ಹಾಲು ಮಾತ್ರ. ಬೇಡಿಕೆ ನೀಗಿಸಲು ಹೊರ ಜಿಲ್ಲೆಗಳಿಂದ ಹಾಲು ತರಿಸಿಕೊಳ್ಳುತ್ತಿದ್ದೇವೆ. ಕಳೆದ ಸಾಲಿಗೆ ಹೋಲಿಸಿದರೆ ಈ ಸಾಲಿನಲ್ಲಿ ಹಾಲು ಉತ್ಪಾದನೆ ನಿತ್ಯ 10 ಸಾವಿರ ಲೀಟರ್‌ನಷ್ಟು ಹೆಚ್ಚಳವಾಗಿದೆ’ ಎಂದು ತಿಳಿಸಿದರು.
‘ನಷ್ಟ ಕಡಿಮೆ ಆದೀತು ಅಷ್ಟೇ’
‘ಹಾಲಿನ ದರ ಏರಿಕೆಯ ಅಷ್ಟೂ ಮೊತ್ತವನ್ನು ರೈತರಿಗೆ ಒದಗಿಸಿದರೂ ಹಾಲು ಉತ್ಪಾದಕರಿಗೆ ಹೆಚ್ಚಿನ ಲಾಭ ಏನೂ ಇಲ್ಲ. ಇದರಿಂದ ನಷ್ಟದ ಪ್ರಮಾಣ ಸ್ವಲ್ಪ ಕಡಿಮೆ ಆಗುತ್ತದೆ ಅಷ್ಟೆ. ನಿತ್ಯ 30 ಲೀ. ಹಾಲು ಉತ್ಪಾದಿಸುತ್ತೇನೆ. ಇದರಿಂದ ಪ್ರತಿ ತಿಂಗಳು ಕನಿಷ್ಟ ರೂ 2 ಸಾವಿರ ಕೈಯಿಂದ ಹಾಕಬೇಕಾಗುತ್ತಿತ್ತು. ಶ್ರಮಕ್ಕೂ ಯಾವುದೇ ಪ್ರತಿಫಲ ಸಿಗುತ್ತಿರಲಿಲ್ಲ. ಹಸಿ ಹುಲ್ಲು ಬೆಳೆಯುತ್ತೇನಾದರೂ ಪ್ರತಿವರ್ಷ ರೂ 35 ಸಾವಿರವನ್ನು ಒಣ ಹುಲ್ಲು ಖರೀದಿಗೆ ವಿನಿಯೋಗಿಸಬೇಕಿತ್ತು. ಈಗ ಈ ಹೊರೆ ಸ್ವಲ್ಪ ಇಳಿಯಬಹುದು’. 

 ದೇವದಾಸ ರಾವ್, ಹಿರಿಯಡ್ಕ ರೈತ.‘ಲೀ.ಗೆ ರೂ 25 ಸಿಕ್ಕರೂ ಕಡಿಮೆ’
‘ಪ್ರತಿ ಲೀಟರ್ ಹಾಲಿನ ಉತ್ಪಾದನಾ ವೆಚ್ಚವೇ ರೂ 22 ಮೀರುತ್ತದೆ. ಉತ್ಪಾದಕರು ಪ್ರತಿ ಲೀಟರ್ ಹಾಲಿಗೆ ರೂ 25 ಪಡೆದರೂ ಕಡಿಮೆಯೇ. ಹಾಲು ಉತ್ಪಾದನೆ ಲಾಭದಾಯಕ ಕಸುಬು ಆಗಬೇಕಾದರೆ ಇಷ್ಟು ಹಣ ಸಿಗಲೇ ಬೇಕು. ಈಗ ಹೆಚ್ಚಿನವರು ಹಾಲು ಉತ್ಪಾದನೆಯನ್ನು ಉಪ ಕಸುಬಾಗಿ ಹೊಂದಿರುವುದರಿಂದ ಸ್ವಲ್ಪ ಮಟ್ಟಿನ ಸಮಾಧಾನ ಇದೆ’. ಶ್ರೀಪಾದ ರೈ, ವಡ್ಡಮೇಶ್ವರ ಹಾಲು       ಉತ್ಪಾದಕರ ಸಂಘದ ಅಧ್ಯಕ್ಷ

‘ದರ ಜಿಲ್ಲೆಯಲ್ಲೇ ನಿರ್ಧಾರವಾಗಲಿ’
‘ಹಾಲಿಗೆ ಎಷ್ಟು ದರ ನಿಗದಿ ಮಾಡಬೇಕು ಎಂಬುದು ಆಯಾ ಜಿಲ್ಲೆಯಲ್ಲಿಯೇ ನಿರ್ಧಾರವಾಗಬೇಕು. ಕರಾವಳಿಯಲ್ಲಿ ಹಸು 5-6 ಕರು ಹಾಕಿದ ಬಳಿಕ ಬೆದೆಗೆ ಬರುವುದಿಲ್ಲ. ಬೇರೆಡೆಗೆ ಹೋಲಿಸಿದರೆ ಮೇವಿನ ವೆಚ್ಚ ವಿಪರೀತ ಜಾಸ್ತಿ. ಬೇಸಿಗೆಯಲ್ಲಿ ಹಾಲಿನ ಉತ್ಪಾದನೆ ಗಣನೀಯವಾಗಿ ಇಳಿಮುಖವಾಗುತ್ತದೆ. ಜಿಲ್ಲೆಯ ಬೇಡಿಕೆಯಷ್ಟು ಹಾಲು ಇಲ್ಲಿ ಉತ್ಪಾದನೆ ಆಗುತ್ತಿಲ್ಲ. ಹಾಗಾಗಿ ಇಲ್ಲಿನ ಬೇಡಿಕೆಗೆ ಅನುಗುಣವಾಗಿ ಹಾಲಿನ ದರ ನಿಗದಿ ಪಡಿಸುವ ಅಧಿಕಾರವನ್ನು ಆಯಾ ಜಿಲ್ಲೆಯ ಹಾಲು ಉತ್ಪಾದಕರಿಗೆ ಬಿಟ್ಟುಕೊಡಬೇಕು.

ಅದನ್ನು ಬೇರೆ ಜಿಲ್ಲೆಗಳಿಂದ ಇಲ್ಲಿಗೆ ಸಾಗಿಸಲು ಒಕ್ಕೂಟ ಸಾಕಷ್ಟು ಹಣ ವೆಚ್ಚ ಮಾಡುತ್ತಿದೆ. ಆ ಮೊತ್ತವನ್ನು ಇಲ್ಲಿನ ರೈತರಿಗೆ ಉತ್ತೇಜನಾ ರೂಪದಲ್ಲಿ ನೀಡಿದರೆ ರೈತರಿಗೆ ಸ್ವಲ್ಪವಾದರೂ ಪ್ರಯೋಜನ ಆದೀತು’.ಕುದಿ ಶ್ರೀನಿವಾಸ ಭಟ್, ಪ್ರಗತಿಪರ ಕೃಷಿಕ

ದರ ಹೆಚ್ಚಳ: ಲಾಭ ರೈತರಿಗೆ
ಪ್ರತಿ ಲೀ. ಹಾಲಿನ ಬೆಲೆ ರೂ. 2 ಹೆಚ್ಚಿಸಿದ ಅಷ್ಟೂ ಲಾಭವನ್ನು ಉತ್ಪಾದಕರಿಗೆ ವರ್ಗಾಯಿಸಲು ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ತೀರ್ಮಾನಿಸಿದೆ. ಇಲ್ಲಿನ ಕುಲಶೇಖರದಲ್ಲಿರುವ ಒಕ್ಕೂಟದ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ನಿರ್ಣಯಕ್ಕೆ ಬರಲಾಯಿತು.‘ಪ್ರತಿ ಲೀ. ಹಾಲಿನ ದರವನ್ನು ರೂ. 2 ಹೆಚ್ಚಿಸಿದ್ದರಿಂದ ಅದರ ನಿರ್ವಹಣಾ ವೆಚ್ಚವಾಗಿ ನಾವು 13 ಪೈಸೆ ಕಾದಿರಿಸಬೇಕು. ಇದರಲ್ಲಿ ರೂ. 7 ಪೈಸೆಯನ್ನು ಮಾರಾಟಗಾರರಿಗೆ ಹಾಗೂ ರೂ 6 ಪೈಸೆಯನ್ನು ಅಳತೆ ಮತ್ತು ತೂಕದ ವ್ಯತ್ಯಾಸ ಸರಿದೂಗಿಸಲು ಕಾದಿರಿಸಬೇಕು.
 
ಜತೆಗೆ ಹಾಲಿನ ಡೇರಿ ನಿರ್ವಹಣೆಗೂ ಹಣ ಬೇಕು. ಡೀಸೆಲ್ ದರ ಹೆಚ್ಚಳದಿಂದ ಹಾಲು ಸಾಗಾಟಕ್ಕೆ ಪ್ರತಿ ತಿಂಗಳೂ ರೂ 12 ಲಕ್ಷ ಹೆಚ್ಚುವರಿ ಹೊರೆ ಬೀಳುತ್ತಿದೆ. ಇಷ್ಟೆಲ್ಲ ಹೊರೆ ಇದ್ದರೂ ಬೆಲೆ ಹೆಚ್ಚಳದ ಲಾಭವಷ್ಟನ್ನೂ ರೈತರಿಗೆ ವರ್ಗಾಯಿಸಲು ಒಕ್ಕೂಟ ತೀರ್ಮಾನಿಸಿದೆ’ ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ತಿಳಿಸಿದರು.‘ಬೆಲೆ ಏರಿಕೆ ಬಗ್ಗೆ ಅನೇಕರು ಚಕಾರ ಎತ್ತಿದ್ದಾರೆ. ಅಂಥವರು ಮನೆಯಲ್ಲಿ ಎರಡು ದನ ಸಾಕಿ, ಕಷ್ಟ ಏನೆಂಬುದನ್ನು ತಿಳಿದು ನಂತರ ಮಾತನಾಡಲಿ’ ಎಂದು ಅವರು ಸವಾಲೆಸೆದರು.





 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT