ನವದೆಹಲಿ (ಪಿಟಿಐ): ಈವರೆಗೆ ಬೀಳಬೇಕಾದ ಮಳೆಯ ಪ್ರಮಾಣದಲ್ಲಿ ಶೇ 31ರಷ್ಟು ಕೊರತೆಯಾಗಿದ್ದು, ಮುಂದಿನ ನಾಲ್ಕು ದಿನಗಳಲ್ಲಿ ದಕ್ಷಿಣ ಭಾರತದಲ್ಲಿ ಹೆಚ್ಚು ಮಳೆ ಬೀಳುವ ಸಾಧ್ಯತೆಯಿದೆ. ದೇಶದ ಉತ್ತರ ಭಾಗದಲ್ಲಿ ಉಷ್ಣಾಂಶ ಕುಸಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಹವಾಮಾನ ಇಲಾಖೆ ಭಾನುವಾರ ಸಂಜೆ ಬಿಡುಗಡೆ ಮಾಡಿರುವ ದಾಖಲೆಗಳ ಪ್ರಕಾರ, ದೇಶದ ಧಾನ್ಯದ ಕಣಜವಾದ ಪಂಜಾಬ್, ಹರಿಯಾಣ ಸೇರಿದಂತೆ ಶೇ 83 ಭಾಗದಲ್ಲಿ ವಿರಳ ಮಳೆ ಬಿದ್ದಿದೆ.
ವಾಡಿಕೆಯಂತೆ ಈವರೆಗೆ 172 ಮಿ.ಮೀ. ಮಳೆ ಬೀಳಬೇಕಿತ್ತು. ಆದರೆ, ದೇಶಾದ್ಯಂತ ಕೇವಲ 119.3 ಮಿ.ಮೀ. ಮಾತ್ರ ಮಳೆಯಾಗಿದೆ. ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿಯ ಮೇಲೆ ಮೋಡಗಳು ದಟ್ಟೈಸಿದ್ದು ದಕ್ಷಿಣ ಭಾರತದಲ್ಲಿ ಮಳೆಯಾಗುವ ಆಶಾಭಾವನೆ ಹುಟ್ಟಿಸಿದೆ. ಕರ್ನಾಟಕದ ಒಳನಾಡು, ಪಶ್ಚಿಮ ಕರಾವಳಿ, ಲಕ್ಷದ್ವೀಪ, ಆಂಧ್ರಪ್ರದೇಶಗಳಲ್ಲಿ ಮಳೆಯಾಗುವ ಸೂಚನೆಯಿದೆ ಎಂದು ಇಲಾಖೆ ತಿಳಿಸಿದೆ.