ಜುಬಾ (ಎಎಫ್ಪಿ): ದಕ್ಷಿಣ ಸುಡಾನ್ನಲ್ಲಿ ಬಂಡುಕೋರರ ವಿರುದ್ಧ ನಡೆಯುತ್ತಿರುವ ಸೇನೆಯ ಕ್ರಮದಿಂದ ಕನಿಷ್ಠ ೪೫ ಸಾವಿರ ಜನರು ನಿರಾಶ್ರಿತರಾಗಿದ್ದು, ವಿಶ್ವಸಂಸ್ಥೆಯ ಶಿಬಿರದಲ್ಲಿ ರಕ್ಷಣೆ ನೀಡಲಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಬಂಡುಕೋರರು ನಡೆಸುತ್ತಿರುವ ಹಿಂಸಾಚಾರ ಹತ್ತು ರಾಜ್ಯಗಳನ್ನು ಹೊಂದಿರುವ ದೇಶದ ಅರ್ಧಭಾಗಕ್ಕೆ ವ್ಯಾಪಿಸಿದೆ ಎಂದೂ ಅದು ತಿಳಿಸಿದೆ.
ರಾಜಧಾನಿ ಜುಬಾದಲ್ಲಿನ ವಿಶ್ವಸಂಸ್ಥೆಯ ಎರಡು ರಕ್ಷಣಾ ಶಿಬಿರದಲ್ಲಿ ಕನಿಷ್ಠ ಇಪ್ಪತ್ತು ಸಾವಿರ ಜನರಿಗೆ ರಕ್ಷಣೆ ನೀಡಲಾಗಿದೆ. ಉಗ್ರರ ವಶದಲ್ಲಿರುವ ಬೊರ್ ಮತ್ತು ಬೆಂಟಿ ಪಟ್ಟಣಗಳಲ್ಲಿರುವ ಶಿಬಿರಗಳಲ್ಲಿ ಕ್ರಮವಾಗಿ ೧೭ ಮತ್ತು ಏಳು ಸಾವಿರ ಜನರಿಗೆ ರಕ್ಷಣೆ ಒದಗಿಸಿರುವುದಾಗಿ ವಿಶ್ವಸಂಸ್ಥೆ ವಕ್ತಾರರು ತಿಳಿಸಿದ್ದಾರೆ.
ಬಂಡುಕೋರರ ಹಿಂಸಾಚಾರದಿಂದಾಗಿ ದಕ್ಷಿಣ ಸುಡಾನ್ನಲ್ಲಿ ಇದುವರೆಗೆ ಸುಮಾರು ೮೧ ಸಾವಿರ ಮಂದಿ ಮನೆಮಠ ಕಳೆದುಕೊಂಡಿದ್ದಾರೆ ಎಂದು ಅಂದಾಜು ಮಾಡಲಾಗಿದ್ದು, ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಬಂಡುಕೋರರು ಮತ್ತು ಸೇನೆಯ ಘರ್ಷಣೆಯಲ್ಲಿ ಇದುವರೆಗೆ ಸುಮಾರು ಐನೂರು ಮಂದಿ ಸತ್ತಿದ್ದಾರೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ. ಆದರೆ ವಾಸ್ತವವಾಗಿ ಈ ಸಂಖ್ಯೆ ಇನ್ನೂ ಹೆಚ್ಚಾಗಿದೆ ಎಂದು ವಿಶ್ವಸಂಸ್ಥೆ ಅಂದಾಜು ಮಾಡಿದೆ.
ಸಾವಿರಾರು ಮಂದಿ ನೆರೆಯ ದೇಶಗಳಿಗೆ ಪಲಾಯನ ಮಾಡಿದ್ದಾರೆ ಎಂದೂ ಹೇಳಲಾಗಿದೆ. ರಾಜಧಾನಿ ಜುಬಾದಿಂದ ೨೦೦ ಕಿ.ಮೀ ದೂರದಲ್ಲಿರುವ ಬೊರ್ ಪಟ್ಟಣ ಸಧ್ಯ ಬಂಡುಕೋರರ ವಶದಲ್ಲಿದ್ದು, ಪುನಃ ವಶಕ್ಕೆ ಪಡೆಯಲು ಸೇನಾ ಕಾರ್ಯಾಚರಣೆ ನಡೆಸಲಾಗುವುದು ಎಂದು ಸೇನೆ ಹೇಳಿಕೊಂಡಿದೆ.