ಚಿಕ್ಕಮಗಳೂರು: ದತ್ತಪೀಠಮಾರ್ಗದ ಕವಿಕಲ್ಗಂಡಿ ಬಳಿ ಭಾನುವಾರ ರಾತ್ರಿ ದೊಡ್ಡ ಬಂಡೆಗಳು ಕುಸಿದು ರಸ್ತೆಗೆ ಬಿದ್ದು ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಗಿರಿಯ ಸುತ್ತಮುತ್ತ ನಿರಂತರ ಮಳೆ ಬೀಳುತ್ತಿರುವುದರಿಂದ ರಸ್ತೆ ಮೇಲೆ ಕಲ್ಲು-ಬಂಡೆಗಳು ಕುಸಿದಿದ್ದು, ಭಾನುವಾರ ಸಂಜೆ ಆ ಮಾರ್ಗದಲ್ಲಿ ತೆರಳುತ್ತಿದ್ದ ಬಸ್ ಮುಂದೆ ಸಾಗಲಾರದೆ, ಪ್ರಯಾಣಿಕರು ಮನೆ ತಲುಪಲು ಪರದಾಡಬೇಕಾಯಿತು. ಸ್ಥಳಕ್ಕೆ ರಾತ್ರಿ ಜೀಪ್ ತರಿಸಿಕೊಂಡು ಕೆಲವರು ಮನೆ ಸೇರಿದರು.
ಸೋಮವಾರ ಬೆಳಿಗ್ಗೆ ಗಿರಿಗೆ ತೆರಳುತ್ತಿದ್ದ ಪ್ರವಾಸಿಗರು ಮುಂದೆ ಸಾಗಲಾರದೆ, ಅಲ್ಲೆ ನಿಂತು ಕಾಲ ಕಳೆಯಬೇಕಾಯಿತು. ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಲೋಕೇಶ್ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಜೆಸಿಬಿ ಯಂತ್ರದಿಂದ ಕಲ್ಲುಗಳನ್ನು ತೆರವುಗೊಳಿಸಲು ಕ್ರಮ ಕೈಗೊಂಡರು.
ಬೆಳಿಗ್ಗೆ ಸುಮಾರು 9.30ಕ್ಕೆ ಬಂಡೆಗಳನ್ನು ತೆರವುಗೊಳಿಸುವ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.
ತೆರವು ಕಾರ್ಯ ಮಂಗಳವಾರ ಪೂರ್ಣಗೊಳ್ಳುವ ನಿರೀಕ್ಷೆ ಇದೆ.ಕಳೆದ ವರ್ಷವೂ ಮಳೆಗಾಲದಲ್ಲಿ ಕವಿಕಲ್ಗಂಡಿ ಬಳಿ ದೊಡ್ಡಗಾತ್ರದ ಬಂಡೆ ಕುಸಿದು ಸಂಚಾರ ಸ್ಥಗಿತಗೊಂಡಿತ್ತು.