ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ನೇತೃತ್ವದಲ್ಲಿ ನಡೆಯುವ ದತ್ತಮಾಲಾ ಅಭಿಯಾನ ಮಂಗಳವಾರ ಜಿಲ್ಲೆಯಲ್ಲಿ ಆರಂಭಗೊಂಡಿತು. ನಗರದ ಕಾಮಧೇನು ಗಣಪತಿ ದೇವಾಲಯದಲ್ಲಿ ಬಜರಂಗದಳ ಮತ್ತು ವಿಶ್ವಹಿಂದು ಪರಿಷತ್ನ 40 ಮಂದಿ ಮುಖಂಡರು ದತ್ತ ಮಾಲೆ ಧರಿಸಿದರು.
ರತ್ನಗಿರಿ ರಸ್ತೆಯ ಕಾಮಧೇನು ಗಣಪತಿ ದೇವಾಲಯಕ್ಕೆ ಬೆಳಿಗ್ಗೆ ಆಗಮಿಸಿದ ಮುಖಂಡರು, ದತ್ತಾತ್ರೇಯ ಸ್ವಾಮಿ ಮೂರ್ತಿಗೆ ಪೂಜೆ ಸಲ್ಲಿಸಿ, ಧರ್ಮಗುರುಗಳ ಸಮ್ಮುಖದಲ್ಲಿ ಕೇಸರಿ ವಸ್ತ್ರಗಳನ್ನು ಧರಿಸಿ, ದತ್ತಾತ್ರೇಯರ ನಾಮಸ್ಮರಣೆ ಮಾಡಿದರು. ದೇವಾಲಯದ ರಘು ಅವಧಾನಿಗಳು ಎಲ್ಲರ ಕೊರಳಿಗೆ ರುದ್ರಾಕ್ಷಿಹಾರ ಹಾಗೂ ಕೇಸರಿ ಶಲ್ಯ ಹಾಕಿದರು.
ಬಜರಂಗದಳದ ರಾಜ್ಯ ಸಂಚಾಲಕ ಸೂರ್ಯನಾರಾಯಣ, ವಿಭಾಗೀಯ ಸಂಚಾಲಕ ಪ್ರೇಮಕಿರಣ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಿವಶಂಕರ್, ಖಜಾಂಚಿ ಯೋಗೀಶ್ರಾಜ್ಅರಸ್, ತಾಲ್ಲೂಕು ಕಾರ್ಯದರ್ಶಿ ಚೇತನ್ಕಲ್ಲುಗುಡ್ಡೆ, ನಗರ ಅಧ್ಯಕ್ಷ ಮುರಳಿಧರ ಕಿಣಿ, ಬಜರಂಗದಳ ತಾಲ್ಲೂಕು ಸಂಚಾಲಕ ರಾಜುಕೋಟೆ, ಗೋರಕ್ಷ ಪ್ರಮುಖ್ ಶಾಂತಿ, ಮುಖಂಡ ರಘು ಸೇರಿದಂತೆ 40 ಮಂದಿ ದತ್ತಮಾಲೆ ಧರಿಸಿದರು.
ಹೊಸದಾಗಿ ಮಾಲೆ ಧರಿಸಿರುವವರಿಗೆ ಪ್ರತಿದಿನ ಕೈಗೊಳ್ಳಬೇಕಾದ ವ್ರತದ ಮಾಹಿತಿಯನ್ನು ಮುಖಂಡರು ನೀಡಿದರು. ಆಲ್ದೂರಿನಲ್ಲಿ 30 ಮಂದಿ ಹಾಗೂ ಕೊಪ್ಪದಲ್ಲಿ 131ಮಂದಿ ಮೊದಲ ದಿನ ದತ್ತಮಾಲೆ ಧರಿಸಿದರು.