ಪುಣೆ (ಪಿಟಿಐ/ಐಎಎನ್ಎಸ್): ನಟ ಸಂಜಯ್ ದತ್ ಅವರಿಗೆ ಪೆರೋಲ್ ನೀಡಿರುವುದು ಈಗ ವಿವಾದದ ಸ್ವರೂಪ ಪಡೆದುಕೊಂಡಿದೆ. ಈ ಕುರಿತು ಮಹಾರಾಷ್ಟ್ರ ಸರ್ಕಾರ ತನಿಖೆಗೆ ಆದೇಶಿಸಿದೆ.
‘ಜಿಲ್ಲಾಧಿಕಾರಿಗಳು ಪೆರೋಲ್ಗೆ ಆದೇಶ ನೀಡಿದ್ದಾರೆ. ಈ ವಿಷಯವನ್ನು ನಾವು ಗಮನಿಸುತ್ತಿದ್ದೇವೆ ಮತ್ತು ಪೆರೋಲ್ ನೀಡಲು ಆಧಾರವಾಗಿಟ್ಟುಕೊಂಡಿರುವ ದಾಖಲೆಗಳನ್ನು ಕೇಳಲಾಗಿದೆ’ ಎಂದು ರಾಜ್ಯದ ಗೃಹ ಸಚಿವ ಆರ್.ಆರ್. ಪಾಟೀಲ ತಿಳಿಸಿದರು.
ಜೈಲಿಗೆ ಬಂದು ಅತಿ ಕಡಿಮೆ ಅವಧಿಯಲ್ಲೇ ಎರಡು ಬಾರಿ ದತ್ಗೆ ಜೈಲಿನಿಂದ ತೆರಳಲು ಅನುಮತಿ ನೀಡಿರುವುದರ ಬಗ್ಗೆ ತನಿಖೆ ನಡೆಸಬೇಕು ಎಂದು ಯೆರವಾಡಾ ಜೈಲಿನಲ್ಲಿ ಎದುರು ಪ್ರತಿಭಟನೆ ನಡೆಸಿದ ರಿಪಬ್ಲಿಕನ್ ಪಾರ್ಟಿ ಇಂಡಿಯಾದ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಜೈಲಿನ ಹೊರಗೆ ಕಪ್ಪು ಬಾವುಟ ಪ್ರದರ್ಶಿಸಿ, ಜೈಲು ಆಡಳಿತದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಪೆರೋಲ್ ರದ್ದತಿಗೆ ಆಗ್ರಹಿಸಿದರು.
ಪತ್ನಿ ಮಾನ್ಯತಾ ಅನಾರೋಗ್ಯದ ಕಾರಣ ಪೆರೋಲ್ ಮೇಲೆ ತೆರಳಲು ಅನುಮತಿ ನೀಡುವಂತೆ ದತ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಮನವಿ ಹಿನ್ನೆಲೆಯಲ್ಲಿ ಪುಣೆ ಜಿಲ್ಲಾಧಿಕಾರಿ ಪ್ರಭಾಕರ ದೇಶಮುಖ್ ಅವರು ನಟ ದತ್ಗೆ ಪೆರೋಲ್ ಮೇಲೆ ಮನೆಗೆ ತೆರಳುವಂತೆ ಸೂಚಿಸಿದ್ದರು.
ಏತನ್ಮಧ್ಯೆ, ಚಲನಚಿತ್ರ ವೀಕ್ಷಣೆ ಮತ್ತು ಜನ್ಮದಿನದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಛಾಯಾಚಿತ್ರಗಳನ್ನು ಸ್ಥಳೀಯ ಪತ್ರಿಕೆಯೊಂದು ಪ್ರಕಟಿಸಿದ್ದು, ಪತ್ನಿ ಅನಾರೋಗ್ಯದ ಹಿನ್ನೆಲೆಯಲ್ಲಿ ದತ್ ಕೇಳಿರುವ ಪೆರೋಲ್ ಈಗ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
‘ಪೆರೋಲ್ ಮೇಲೆ ದತ್ ಬಿಡುಗಡೆ ಮಾಡುವುದು ಇನ್ನೂ ನಿರ್ಧಾರವಾಗಿಲ್ಲ’ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ನಾಗಪುರ ವರದಿ (ಐಎಎನ್ಎಸ್): ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವರದಿ ಕೇಳಿರುವುದರಿಂದ ನಟ ದತ್ಗೆ ಪೆರೋಲ್ ನೀಡಿರುವುದರ ಮೇಲೆ ಅನಿಶ್ಚಿತತೆ ಎದುರಾಗಿದೆ.
ಪತ್ನಿ ಮಾನ್ಯತಾ ಯಕೃತ್ತಿನಲ್ಲಿ ಗೆಡ್ಡೆ
ಮುಂಬೈ (ಪಿಟಿಐ): ನಟ ದತ್ ಪತ್ನಿ ಮಾನ್ಯತಾ ಅವರ ಯಕೃತ್ತಿನ ಮೇಲೆ ಗೆಡ್ಡೆ ಇದೆ ಎಂದು ಅವರಿಗೆ ತಪಾಸಣೆ ನಡೆಸಿದ ವೈದ್ಯ ಅಜಯ್ ಚೌಗುಲೆ ಹೇಳಿದ್ದಾರೆ. ‘ಮಾನ್ಯತಾ ಅವರಿಗೆ ಎದೆ ನೋವೂ ಇದೆ. ಇದರಿಂದಾಗಿ 15–20 ದಿನದಲ್ಲಿ ಹತ್ತು ಕೆ.ಜಿ. ತೂಕ ಕಡಿಮೆ ಆಗಿದೆ.
ಎದೆ ನೋವಿಗೆ ಸಂಬಂಧಿಸಿದಂತೆ ವಿವರವಾದ ಪರೀಕ್ಷೆ ನಡೆಸಬೇಕು ಎನ್ನುವ ಸಲಹೆ ನೀಡಿದ್ದೇವೆ. ಈ ಪರೀಕ್ಷೆ ನಡೆಸಿದ ನಂತರವೇ ಶಸ್ತ್ರಚಿಕಿತ್ಸೆ ಮಾಡಬೇಕೋ ಅಥವಾ ಬೇಡವೋ ಎನ್ನುವ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿದೆ’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.