ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸುತ್ತಿದ್ದಾರೆ. ಸರ್ಕಾರ ವಿದ್ಯುತ್ ದರವನ್ನು ಮತ್ತೆ ಹೆಚ್ಚಿಸಲು ಹೊರಟಿದೆ. ಗುಜರಾತ್ನಲ್ಲಿ ಕಳೆದ 10 ವರ್ಷಗಳಿಂದ ವಿದ್ಯುತ್ ದರ ಏರಿಸಿಲ್ಲ ಎನ್ನುವ ವಿಷಯವನ್ನು ಪತ್ರಿಕೆಗಳಲ್ಲಿ ಓದಿದ್ದೇವೆ.
ಹೆಚ್ಚು ಹಣ ಕೊಟ್ಟು ವಿದ್ಯುತ್ ಖರೀದಿಸುತ್ತಿದ್ದೇವೆ ಎಂಬ ಕಾರಣ ನೀಡಿ ದರ ಏರಿಸಲು ಸರ್ಕಾರ ಸಜ್ಜಾಗುತ್ತಿದೆ. ಹೆಚ್ಚು ಹಣ ಕೊಟ್ಟು ವಿದ್ಯುತ್ ಖರೀದಿಸಿ ಅದನ್ನು ಜನಗಳ ಮೇಲೆ ಹೇರುವುದರಲ್ಲಿ ಅರ್ಥವಿಲ್ಲ. ವಿದ್ಯುತ್ ಖರೀದಿ ಕಡಿಮೆಗೊಳಿಸಿ ದಿನಕ್ಕೆ ಎರಡು ಗಂಟೆ ಜನರಿಗೆ ವಿದ್ಯುತ್ ನಿಲ್ಲಿಸಿದರೂ ಪರವಾಗಿಲ್ಲ. ಮಿತವ್ಯಯದ ಅಗತ್ಯವನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು.
ಬೆಂಗಳೂರಿನ ಕೆಲವು ಬಡಾವಣೆಗಳಲ್ಲಿ ಸಂಪೂರ್ಣ ಕತ್ತಲಾಗುವ ಅರ್ಧ ಗಂಟೆ ಮೊದಲೇ (5.45ಕ್ಕೆ) ಬೀದಿ ದೀಪಗಳು ಹತ್ತಿಕೊಳ್ಳುತ್ತವೆ. ಕೆಲವು ಚಿಕ್ಕ ರಸ್ತೆಗಳಲ್ಲಿ ಹೆಚ್ಚು ಕಡಿಮೆ ಪ್ರತಿ ಕಂಬದಲ್ಲೂ ದೀಪ ಅಳವಡಿಸಿದ್ದಾರೆ.ಇದರಿಂದ ವಿದ್ಯುತ್ ಅಪ ವ್ಯಯವಾಗುತ್ತಿದೆ.
ಕೆಲವು ಸಾರ್ವಜನಿಕ ಸಮಾರಂಭಗಳಲ್ಲಿ ಕಂಬಗಳಿಂದ ನೇರವಾಗಿ ವಿದ್ಯುತ್ ಪಡೆಯುತ್ತಾರೆ.
ವಿದ್ಯುತ್ ಪೋಲಾಗುವುದನ್ನು ತಡೆಯುವ ಬದಲು ದರ ಏರಿಕೆ ಮಾಡಲು ಅಧಿಕಾರಿಗಳು ಸಲಹೆ ಕೊಡುತ್ತಾರೆ. ದರ ಹಚ್ಚಿಸುವ ಪ್ರಸ್ತಾವವನ್ನು ಸರ್ಕಾರ ಕೈಬಿಡಬೇಕು.