ಹೊಸಕೋಟೆ: ಇಬ್ಬರು ಕಳ್ಳರನ್ನು ಬಂಧಿಸಿರುವ ಸ್ಥಳೀಯ ಪೊಲೀಸರು ಅವರಿಂದ ₨ 20,000 ನಗದು, 30 ಗ್ರಾಂ ಚಿನ್ನದ ಆಭರಣ ಹಾಗೂ ಆಟೋರಿಕ್ಷಾ ಒಂದನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ಜಯನಗರ 9ನೇ ಬ್ಲಾಕ್ ಬಳಿಯ ಕಾರ್ಪೋರೇಷನ್ ಕಾಲೊನಿಯ ವಿಜಯ್ (27) ಹಾಗೂ ಮುನಿಸ್ವಾಮಿ (45) ಬಂಧಿತರು.
ಭಾನುವಾರ ಕಾಡುಗೋಡಿಯಿಂದ ಹೊಸಕೋಟೆಗೆ ಬರುತ್ತಿದ್ದ ಓಬಳಹಳ್ಳಿಯ ಹನುಮಯ್ಯ ಎಂಬುವವರು ಇಲ್ಲಿನ ಕೆಇಬಿ ವೃತ್ತದ ಬಳಿ ಬಸ್ನಿಂದ ಇಳಿಯುತ್ತಿದ್ದಂತೆ ಇಬ್ಬರು ವ್ಯಕ್ತಿಗಳು ಅವರ ಜೇಬಿನಲ್ಲಿದ್ದ ₨ 70,000 ಹಣವನ್ನು ಕಸಿದು ಅಲ್ಲೇ ನಿಂತಿದ್ದ ಆಟೋರಿಕ್ಷಾ ಏರಿದರು. ತಕ್ಷಣ ಆಟೋರಿಕ್ಷಾ ಸಂಖ್ಯೆ ದಾಖಲಿಸಿಕೊಂಡ ಹನುಮಯ್ಯ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು.
ಕಾರ್ಯಪ್ರವೃತ್ತರಾದ ಪೊಲೀಸರು ಬೆಂಗಳೂರು ರಸ್ತೆಯಲ್ಲಿ ಆಟೋವನ್ನು ವಶಪಡಿಸಿಕೊಂಡು ಅದರಲ್ಲಿದ್ದ ಇಬ್ಬರನ್ನು ಹಿಡಿಯುವಲ್ಲಿ ಸಫಲರಾದರು. ಆರೋಪಿಗಳ ಬಂಧನದಿಂದ ಕಳೆದ ತಿಂಗಳು ಹೊಸಕೋಟೆ ಬಳಿ ನಡೆದ ಮತ್ತೊಂದು ಪ್ರಕರಣ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು ಶೋಧ ಕಾರ್ಯ ನಡೆದಿದೆ.
ಶವ ಪತ್ತೆ: ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮಂಡೂರು ಗ್ರಾಮದ ಬಳಿಯ ಕುಂಟೆಯಲ್ಲಿ ವ್ಯಕ್ತಿಯೊಬ್ಬರ ಶವ ಬುಧವಾರ ಪತ್ತೆಯಾಗಿದೆ. ಮೃತರನ್ನು ಮಂಡೂರು ಗ್ರಾಮದ ನಾಗೇಶ (38) ಎಂದು ಗುರುತಿಸಲಾಗಿದೆ. ಟೆಂಪೊ ಒಂದನ್ನು ಬಾಡಿಗೆಗೆ ಓಡಿಸುತ್ತಿದ್ದ ಅವರು ಭಾನುವಾರದಿಂದ ಕಾಣೆಯಾಗಿದ್ದರು. ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.