ಮಾನವೀಯತೆ
`ಮೃಗಾಲಯದಲ್ಲಿ ದತ್ತು ಪರ್ವ~ ಲೇಖನ ಸಮಾಜದಲ್ಲಿ ಇನ್ನೂ ಮಾನವೀಯತೆ ಜೀವಂತ ಇರುವುದಕ್ಕೆ ಸಾಕ್ಷಿ. ಖಗ, ಮೃಗಗಳ ದತ್ತು ಪಡೆದ ಎಲ್ಲಾ ಸಹೃದಯ ದಾನಿಗಳಿಗೆ ಅಭಿನಂದನೆಗಳು.
ಈ ದತ್ತು ಪರ್ವವನ್ನು ಮೊದಲು ಪ್ರಾರಂಭಿಸಿದವರು ಯಾರೆಂಬ ಮಾಹಿತಿ ಇದ್ದರೆ, ಅದನ್ನೂ ಪ್ರಕಟಿಸಿದರೆ ತುಂಬಾ ಒಳ್ಳೆಯದು. ಲೇಖಕ ಲಕ್ಷ್ಮಣ ಟಿ. ನಾಯ್ಕ ಅವರಿಗೆ ಧನ್ಯವಾದಗಳು.
-ಕ. ಗೋ. ಚಂದ್ರಶೇಖರಾಚಾರಿ ಬೆಂಗಳೂರು.
ಸಂಗ್ರಹಯೋಗ್ಯ
ಬದುಕು ಕೊಟ್ಟ ಚೆರಿಷ್ಮಾ ಗುಲಾಬಿ ಚಿತ್ರ ಲೇಖನ (ಅರುಣಾ ಎಂ. ಜಿ) ತುಂಡು ಭೂಮಿ ದುಂಡು ಫಲದ ಆರ್ಥಿಕ ನೀತಿ ಸಾದರಪಡಿಸಿತ್ತು. ಕೇವಲ 10 ಗುಂಟೆ ಭೂಮಿಯಲ್ಲಿ ಚೆರಿಷ್ಮಾ ಗುಲಾಬಿ ಬೆಳೆದು ಬದುಕು ಸಾಗಿಸಿರುವ ಧನಂಜಯ ರೈತರಿಗೆ ಮಾದರಿಯಾಗಿ ಕಂಗೊಳಿಸಿದ್ದಾರೆ.
ಚೆರಿಷ್ಮಾ ಗುಲಾಬಿ ಹೇಗೆ ಬೆಳೆಯಬೇಕು, ಮಾರುಕಟ್ಟೆ ಹೇಗಿದೆ ಈ ಎಲ್ಲಾ ವಿವರ ನೀಡಿದ 26ರ ಸಂಚಿಕೆ ಸಂಗ್ರಹಯೋಗ್ಯ.
-ಎಚ್. ಆನಂದ ಕುಮಾರ್. ಚಿತ್ರದುರ್ಗ.
ಮನಮಿಡಿಯಿತು
ಸಿದ್ದಿಕ್ ನೀರಾಜೆಯವರ `ಜೀವನ ಜ್ಯೋತಿಗೆ ಈ ಮಕ್ಕಳೆಂದರೆ ಪ್ರೀತಿ~ ಲೇಖನ ಓದಿ ಮನ ಮಿಡಿಯಿತು. 68 ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಸಂಪೂರ್ಣ ಉಚಿತವಾಗಿ ಶಿಕ್ಷಣ ನೀಡುವ ಫಾದರ್ ಸಕಾರಿಯಾ ಮಾದರಿ ವ್ಯಕ್ತಿಯಾಗಿ ನಿಲ್ಲುತ್ತಾರೆ.
-ಎಚ್. ಭೀಮರಾವ್ ವಾಷ್ಠರ್, ಸುಳ್ಯ