ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ಕಥನದ ಬಣ್ಣದ ವೇಷ

Last Updated 27 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

`ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ದಲಿತ ಲೇಖಕನೊಬ್ಬನ ಆತ್ಮಕಥೆ ಸಿನಿಮಾ ಆಗುತ್ತಿರುವುದು ಇದೇ ಮೊದಲು~. ಪ್ರೊ.ಅರವಿಂದ  ಮಾಲಗತ್ತಿ ಅಭಿಮಾನದಿಂದ ಹೇಳಿದರು.
 
ಅವರು ಹೀಗೆ ಹೇಳುವುದಕ್ಕೂ ಕಾರಣವಿತ್ತು. ಅವರದೇ ಆತ್ಮಕಥೆ `ಗೌರ್ಮೆಂಟ್ ಬ್ರಾಹ್ಮಣ~ ಈಗ ಸಿನಿಮಾ ಆಗುತ್ತಿದೆ. ಪತ್ರಕರ್ತ ಜಿ.ಆರ್.ಸತ್ಯಲಿಂಗರಾಜು, ಮಾಲಗತ್ತಿಯವರ ಬದುಕಿನ ಕಥನವನ್ನು ದೃಶ್ಯ ಮಾಧ್ಯಮಕ್ಕೆ ತರಲು ಮುಂದಾಗಿದ್ದಾರೆ.

ಮೈಸೂರಿನ ಆಲನಹಳ್ಳಿಯಲ್ಲಿರುವ ಶ್ರೀ ವಾಸವಿ ಶಾಂತಿಧಾಮದಲ್ಲಿ `ಗೌರ್ಮೆಂಟ್ ಬ್ರಾಹ್ಮಣ~ನ ಮುಹೂರ್ತ ನಡೆಯಿತು (ಅ.24). ಈ ಸಂದರ್ಭದಲ್ಲಿ ನಿರ್ದೇಶಕ ಸತ್ಯಲಿಂಗರಾಜು- `ಗೌರ್ಮೆಂಟ್ ಬ್ರಾಹ್ಮಣ ಕನ್ನಡ ಚಿತ್ರರಂಗದಲ್ಲಿ ವಿಭಿನ್ನವಾದ ಪ್ರಯೋಗವಾಗುತ್ತದೆ.

ರಾಜ್ಯದಲ್ಲಿ ದಲಿತ ಚಳವಳಿ ಸೇರಿದಂತೆ ಹಳೆಯ ಚಳವಳಿಗಳು ದಿಕ್ಕು ತಪ್ಪಿವೆ. ಎಲ್ಲ ಹೋರಾಟಗಳು ಬೇರೆ ಬೇರೆ ದಾರಿ ಹಿಡಿದಿವೆ~ ಎಂದರು. ಅವರ ಮಾತಿನಲ್ಲಿ ದಲಿತ ಚಳವಳಿಯಲ್ಲಿನ ವೈರುಧ್ಯಗಳ ಅವಲೋಕನಕ್ಕೆ ತಮ್ಮ ಚಿತ್ರ ಪ್ರೇರಣೆ ಒದಗಿಸಬಹುದು ಎನ್ನುವ ಇಂಗಿತವಿತ್ತು.

ಅಂದಹಾಗೆ, ಅರವಿಂದ ಮಾಲಗತ್ತಿ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರು. ತಮ್ಮ ಆತ್ಮಕಥನ ದೃಶ್ಯ ರೂಪಕ್ಕೆ ಇಳಿಯುತ್ತಿರುವುದು ಸಹಜವಾಗಿಯೇ ಅವರಿಗೆ ಖುಷಿಯನ್ನುಂಟು ಮಾಡಿದೆ.

`ಇದು ನನ್ನದೇ ಆತ್ಮಕಥೆ; ಇದನ್ನು ದಲಿತ ಆತ್ಮಕಥೆ ಎಂದರೂ ತಪ್ಪಾಗಲಾರದು. ಈ ರೀತಿಯ ಆತ್ಮಕಥೆಗಳಿಗೆ ಮಹಾರಾಷ್ಟ್ರ ಹೆಸರುವಾಸಿ. ಆದರೆ ನಮ್ಮಲ್ಲಿ ಇನ್ನೂ ಅಂತಹ ವಾತಾವಾರಣ ಸೃಷ್ಟಿಯಾಗಿಲ್ಲ~ ಎಂದರು. 

`ಗೌರ್ಮೆಂಟ್ ಬ್ರಾಹ್ಮಣ~ ಕೃತಿಯನ್ನು ತೆರೆಗೆ ತರಲು ಮನಸ್ಸು ಮಾಡಿರುವುದು `ಚೇತನ ಪ್ರಕಾಶನ~ದ ಮಾಲೀಕರಾದ ನಟರಾಜ ಚೌಧುರಿ ಹಾಗೂ ಮುತ್ತು ನಾಗಾರ್ಜುನ ಚೌಧುರಿ. ಇ್ಲ್ಲಲೊಂದು ಸ್ವಾರಸ್ಯವಿದೆ. ನಟರಾಜ ಚೌಧುರಿ ಅವರ ಪುತ್ರ ಪಿಯುಸಿ ವಿದ್ಯಾರ್ಥಿ. `ಗೌರ್ಮೆಂಟ್ ಬ್ರಾಹ್ಮಣ~ ಕೃತಿ ಅವರಿಗೆ ಸಿಕ್ಕಾಪಟ್ಟೆ ಇಷ್ಟವಾಯಿತು.
 
ಆ ಖುಷಿಯಲ್ಲೇ ಪುಸ್ತಕವನ್ನು ಅಪ್ಪನ ಕೈಗಿಟ್ಟು, `ಇದನ್ನು ಓದಿ~ ಎಂದರಂತೆ. ಕೃತಿಯನ್ನು ನೋಡುತ್ತಿದ್ದಂತೆ ನಟರಾಜ ಚೌಧುರಿ- `ಇದರ ಐದನೇ ಆವೃತ್ತಿಯನ್ನು ನಾನೇ ಮುದ್ರಿಸಿದ್ದೇನೆ~ ಎಂದರಂತೆ. `ಇದನ್ನು ಸಿನಿಮಾ ಮಾಡಿದರೆ ಹೇಗೆ?~ ಎಂದು ಅಪ್ಪನ ಮಾತಿಗೆ ಮುತ್ತು ಪ್ರತಿಕ್ರಿಯಿಸಿದರಂತೆ. ಮಗನ ಮಾತು ಪುಸ್ತಕ ಓದಿದ ಮೇಲೆ ಅಪ್ಪನಿಗೂ ಸರಿ ಎನ್ನಿಸಿದೆ.

ಚೌಧುರಿಯವರು ತಮಗೆ ಪರಿಚಯವಿದ್ದ ಪತ್ರಕರ್ತ ಸತ್ಯಲಿಂಗರಾಜು ಅವರನ್ನು ಭೇಟಿ ಮಾಡಿ ಸಿನಿಮಾ ಬಗ್ಗೆ ಪ್ರಸ್ತಾಪಿಸಿದಾಗ, ಅವರಿಗೂ ಈ ಪ್ರಸ್ತಾಪ ಪುಳಕ ತಂದಿದೆ. ಆ ಹುಮ್ಮಸ್ಸಿನಲ್ಲೇ, ಈಗಾಗಲೇ ಹತ್ತಾರು ಚಿತ್ರಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವವಿದ್ದ ಸತ್ಯಲಿಂಗರಾಜು ಚಿತ್ರಕಥೆ ರಚಿಸಿದ್ದಾರೆ.

ಆನಂತರವೇ ಅರವಿಂದ ಮಾಲಗತ್ತಿಯನ್ನು ಭೇಟಿ ಮಾಡಿ ಎಲ್ಲ ವಿಷಯವನ್ನೂ ತಿಳಿಸಿರುವುದು. ವಿಷಯ ತಿಳಿದ ಮಾಲಗತ್ತಿಯವರೂ ಸಕಾರಾತ್ಮಕವಾಗಿ ಸ್ಪಂದಿಸಿ ಒಪ್ಪಿಗೆ ನೀಡಿದ್ದಾರೆ. ಹೀಗೆ ಗೌರ್ಮೆಂಟ್ ಬ್ರಾಹ್ಮಣ ಖುಷಿ ಖುಷಿಯಾಗಿಯೇ ಶುರುವಾಗಿದೆ.

ರವಿಚೇತನ್ ಚಿತ್ರದ ನಾಯಕ. ಈತ `ಸತ್ಯಾನಂದ~ ಚಿತ್ರದ ಹೀರೋ. `ನನಗೆ ಹೋರಾಟ ಅಂದ್ರೆ ಬಹಳ ಇಷ್ಟ. ಚಿತ್ರರಂಗದಲ್ಲಿ ನೆಲೆಯೂರಲೂ ಹೋರಾಟ ನಡೆಸುತ್ತಲೇ ಇದ್ದೇನೆ. ನಾನು ಮೂಲತಃ ಉತ್ತರ ಕರ್ನಾಟಕದ ಮುಧೋಳದವನು. ಈ ಚಿತ್ರ ನನ್ನ ವೃತ್ತಿ ಜೀವನದಲ್ಲಿ ಒಂದು ಮೈಲಿಗಲ್ಲು ಆಗಲಿದೆ~ ಎಂದರು.

ರವಿಚೇತನ ಈಗಾಗಲೇ 70ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಈ ವರ್ಷ `ಸತ್ಯಾನಂದ~, `ಸಂಗೊಳ್ಳಿ ರಾಯಣ್ಣ~, `ಮಾಯದಂಥ ಮಳೆಬಂತಣ್ಣ~, `ಶ್ರೀ ಕ್ಷೇತ್ರ ಆದಿ ಚುಂಚನಗಿರಿ~ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಮೈಸೂರಿನ ಹುಡುಗಿ ರೋಷನಿಗೆ ಇದು ನಾಯಕಿಯಾಗಿ ಮೊದಲ ಚಿತ್ರ. ಈಗಾಗಲೇ `ಬಲರಾಮ~, `ದಿಗ್ಗಜರು~, `ಕಾಮಣ್ಣನ ಮಕ್ಕಳು~ ಚಿತ್ರಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದಾರೆ. `ತುಳಸಿ~ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ.

ಈ ಚಿತ್ರದ ಮತ್ತೊಂದು ವಿಶೇಷ `ಒಡನಾಡಿ~ ಹುಡುಗ ಭೀಮ. ಈ ಭೀಮನಿಗೆ ಅಭಿನಯದ ಗಂಧ ಗಾಳಿಯೂ ಇಲ್ಲ. ಈತನನ್ನು ನೋಡಿದ ನಿರ್ದೇಶಕರಿಗೆ ಬಾಲಕ ಅರವಿಂದ ಮಾಲಗತ್ತಿ ಪಾತ್ರ ಕಣ್ಣು ಮುಂದೆ ಬಂದಿತು. ಹೀಗಾಗಿ ಭೀಮ ಕ್ಯಾಮರಾ ಎದುರಿಸುತ್ತಿದ್ದಾನೆ.

ನಿರ್ದೇಶಕರ ಸೂಚನೆಯಂತೆ ಭೀಮ ತಲೆಕೂದಲನ್ನು ಸೊಂಪಾಗಿ ಬೆಳೆಸ್ದ್ದಿದಾನೆ. ಮನೆಗೆಲಸ ಮಾಡುವ ಈತನ ತಾಯಿಗೆ ಮಗ ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ಅಭಿಮಾನದ ಸಂಗತಿ.

ಚಿತ್ರಕ್ಕೆ ಪಿ.ಕೆ.ಎಚ್.ದಾಸ್ ಛಾಯಾಗ್ರಹಣವಿದ್ದು, ಪ್ರವೀಣ್ ಗೋಡ್ಖಿಂಡಿ ಸಂಗೀತವಿದೆ. ಚಿತ್ರಕತೆ, ಸಂಭಾಷಣೆ, ಸಾಹಿತ್ಯವನ್ನು ಲಿಂಗರಾಜು  ಬರೆದಿದ್ದಾರೆ. ರಮೇಶ್ ಭಟ್, ಮಂಡ್ಯ ರಮೇಶ್, ತನ್ಮಯಿ ಕಶ್ಯಪ್, ಅಪೂರ್ವ, ಬಾಲು, ಶ್ರೀಹರಿ, ಸುನಂದ ಹೆಗ್ಡೆ, ಜಯರಾಂ ಚಿತ್ರದಲ್ಲಿ  ಅಭಿನಯಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT