ನವಲಗುಂದ: ತಾಲ್ಲೂಕಿನ ನಾಯ್ಕನೂರ ಗ್ರಾಮದ ದಲಿತ ಯುವಕನೊಬ್ಬನಿಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿ ಕರಬಸಪ್ಪ ಜಾವೂರ ಎಂಬಾತನನ್ನು ಬಂಧಿಸಿದ್ದಾರೆ.
ಶನಿವಾರ ಮಧ್ಯಾಹ್ನ ನಾಯ್ಕನೂರ ಗ್ರಾಮದ ದಲಿತ ಯುವಕನಾದ ರವಿ ಕರಿಯಪ್ಪ ದೊಡ್ಡಮನಿ ಎಂಬುವನು ಕೂಲಿ ಕೆಲಸಕ್ಕೆಂದು ಹೊಲಕ್ಕೆ ಹೊದ ಸಂದರ್ಭದಲ್ಲಿ ಅದೇ ಗ್ರಾಮದ ಸವರ್ಣಿಯರಾದ ಕರಬಸಪ್ಪ ಜಾವೂರ ಎಂಬಾತ ಹಳ್ಳದ ಪಕ್ಕದಲ್ಲಿ ಮರೆಯಾಗಿ ನಿಂತು ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಾಗೂ ಕಲ್ಲಿನಿಂದ ಹೊಡೆಯಲು ಪ್ರಯತ್ನಿಸಿದ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ.
ಈಗಾಗಲೇ ವರದಿಯಾಗಿರುವಂತೆ ಗ್ರಾಮದಲ್ಲಿ ದಲಿತರಿಗೆ ಬಹಿಷ್ಕಾರ ಹಾಕಲಾಗಿದ್ದು, ದಲಿತ ಸಮುದಾಯಕ್ಕೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಆಗಸ್ಟ್ ತಿಂಗಳಲ್ಲಿಯೇ ಒಂದು ದೂರು ದಾಖಲಾಗಿತ್ತು. ಸರ್ಕಾರ ಸವರ್ಣೀಯರು ಹಾಗೂ ದಲಿತರ ನಡುವೆ ಸಂಧಾನ ಯತ್ನ ನಡೆಸಿದ್ದರೂ ಬಹಿಷ್ಕಾರ ಮುಂದುವರಿದಿದ್ದು, ಸರ್ಕಾರದ ಸಂಧಾನ ಇನ್ನೂ ಫಲಿಸಿಲ್ಲ ಎಂಬುದು ಗ್ರಾಮದ ದಲಿತರ ದೂರು.