ಬಸವಕಲ್ಯಾಣ: ಇಲ್ಲಿನ ಕುಂಬಾರ ಪಾಳಿಯ ದಾರುಲ್ ಸಲಾಂ ಸಭಾಂಗಣದಲ್ಲಿ ಈಚೆಗೆ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಪ್ಯಾಂಥರ ಜಿಲ್ಲಾಧ್ಯಕ್ಷ ರವಿ ಗಾಯಕವಾಡ ಅವರು ಸಂಘಟನೆ ಬಲಗೊಂಡಾಗ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಹಾಯ ಆಗುತ್ತದೆ. ಅನ್ಯಾಯದ ವಿರುದ್ಧ ಹೋರಾಡಲು ಶಕ್ತಿ ದೊರಕುತ್ತದೆ ಎಂದರು.
ಡಾ.ಬಾಬಾಸಾಹೇಬ್ ಅಂಬೇಡ್ಕರ ಅವರು ತೋರಿದ ಮಾರ್ಗದಲ್ಲಿ ನಡೆಯುವವರಿಗೆ ಮತ್ತು ಸಚ್ಚ್ಯಾರಿತ್ರ್ಯವಂತರಿಗೆ ವಿಧಾನಸಭೆ ಚುನಾವಣೆಯಲ್ಲಿ ಬೆಂಬಲಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಯೋಚಿಸಿ ನಿರ್ಣಯ ಕೈಗೊಳ್ಳಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ಎಂ.ಜಿ.ಮುಳೆ ಅವರನ್ನು ಬೆಂಬಲಿಸಲು ಸರ್ವಾನು ಮತದಿಂದ ನಿರ್ಣಯಿಸ ಲಾಯಿತು.
ಸಮನ್ವಯ ಸಮಿತಿ ಅಧ್ಯಕ್ಷ ನರಸಿಂಗರಾವ ಕಾಂಬಳೆ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಅರ್ಜುನ ಕನಕ, ಮನೋಹರ ಮೈಸೆ, ಬಾಬುರಾವ ಮದಲವಾಡಾ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ನಾಗನಾಥ ವಾಡೇಕರ್, ಭಾಸ್ಕರ ಕಾಂಬಳೆ, ಶಿರೋಮಣಿ ನೀಲನೋರ್, ಮನೋಜ ಮುಡಬಿಕರ್ ಮಾತನಾಡಿದರು.
ಮುಖಂಡರಾದ ಸದಾನಂದ ಭೋಸ್ಲೆ, ಮಾರುತಿ ಲಾಡೆ, ವಿನೋದ ಸಿಂಧೆ ಉಪಸ್ಥಿತರಿದ್ದರು. ಉಪನ್ಯಾಸಕ ಜೈಶೇನ್ ಪ್ರಸಾದ ನಿರೂಪಿಸಿದರು. ವಿವಿಧ ದಲಿತ ಸಂಘಟನೆಗಲ ಕಾರ್ಯಕರ್ತರು ಪಾಲ್ಗೊಂಡಿದ್ದರು.