ಚಿಕ್ಕಬಳ್ಳಾಪುರ: ‘ಅಧಿಕಾರಿಯಾಗಿ ಜನಸಾಮಾನ್ಯರೊಂದಿಗೆ ಹೇಗಿರಬೇಕು ಎಂಬುದು ನಿಮಗೆ ಗೊತ್ತಿಲ್ಲವೇ, ದಲಿತ ಸಮುದಾಯದವರು, ಹಿಂದುಳಿದ ವರ್ಗದವರು ಮುಂತಾದವರು ಕಚೇರಿಗೆ ಬಂದರೆ ಅವರೊಂದಿಗೆ ಸರಿಯಾಗಿ ಸ್ಪಂದಿಸಲು ಆಗುವುದಿಲ್ಲವೇ, ಬೇಡಿಕೆಗಳು ಏನೆಂಬುದನ್ನು ಆಲಿಸಿ, ಅವುಗಳನ್ನು ಒಂದೊಂದಾಗಿ ಪರಿಹರಿಸಲು ನಿಮ್ಮಿಂದ ಆಗುವುದಿಲ್ಲವೇ, ಎಲ್ಲರೊಂದಿಗೂ ಸರಿಯಾಗಿ ವರ್ತಿಸಬೇಕು. ಇನ್ನೊಮ್ಮೆ ನಿಮ್ಮ ವಿರುದ್ಧ ಇಂತಹ ದೂರು ಕೇಳಿ ಬರಬಾರದು’ –ಹೀಗೆ ತಹಶೀಲ್ದಾರ್ ಡಿ.ಬಿ.ನಟೇಶ್ ಅವರಿಗೆ ಎಚ್ಚರಿಕೆ ನೀಡಿದವರು ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ಅಧಿಕಾರಿಗಳ ವಿರುದ್ಧ ದಲಿತ ಸಂಘರ್ಷ ಸಮಿತಿ ಸಂಚಾಲಕ ಕೆ.ಸಿ.ರಾಜಾಕಾಂತ್ ಅವರು ಸಲ್ಲಿಸಿದ ಮನವಿಪತ್ರ ಸ್ವೀಕರಿಸಿ, ಅಹವಾಲು ಆಲಿಸಿದ ಬಳಿಕ ಅವರು ಸ್ಥಳಕ್ಕೆ ನಟೇಶ್ ಅವರನ್ನು ಕರೆಸಿಕೊಂಡು ತರಾಟೆಗೆ ತೆಗೆದುಕೊಂಡರು. ಜನರತ್ತ ನಿರ್ಲಕ್ಷ್ಯ ತೋರದಂತೆ ಕರ್ತವ್ಯ ನಿರ್ವಹಿಸಲು ಸೂಚಿಸಿದರು.
ಇದಕ್ಕೂ ಮುನ್ನ ಜಿಲ್ಲೆಯಲ್ಲಿ ದಲಿತ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಸಮುದಾಯದವರು ಸೇರಿದಂತೆ ಜನಸಾಮಾನ್ಯರ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದರು. ಅವರು ಯಾವುದೆಲ್ಲ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಆಗಬೇಕಿರುವ ಕಾರ್ಯಗಳು ಯಾವ್ಯಾವು ಎಂಬುದರ ಬಗ್ಗೆ ತಿಳಿದುಕೊಂಡರು.
ದಲಿತ ಸಂಘರ್ಷ ಸಮಿತಿ ಸಂಚಾಲಕ ಕೆ.ಸಿ.ರಾಜಾಕಾಂತ್ ಮಾತನಾಡಿ, ಜಿಲ್ಲೆಯಲ್ಲಿ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ಅಧಿಕಾರಿಗಳು ಜನಸಾಮಾನ್ಯರ ಸಮಸ್ಯೆ ಮತ್ತು ಬೇಡಿಕೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ವಾರಗಟ್ಟಲೆ ಪ್ರತಿಭಟನೆ ನಡೆಸಿದರೂ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ. ನಮ್ಮ ಸಮಸ್ಯೆಗಳು ಏನೆಂಬುದನ್ನು ತಿಳಿಯಲು ಸಭೆಯನ್ನು ಸಹ ಕರೆಯಲಿಲ್ಲ. ಪರಿಸ್ಥಿತಿ ಇದೇ ರೀತಿಯಲ್ಲಿ ಮುಂದುವರಿದರೆ, ನಾವು ಜಿಲ್ಲೆಯಲ್ಲಿ ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
‘ಯಾಕೆ ಇಂತಹ ಬೆಳವಣಿಗೆ ನಡೆದಿದೆ ಎಂಬುದರ ಬಗ್ಗೆ ತಹಶೀಲ್ದಾರ್ ಡಿ.ಬಿ.ನಟೇಶ್ ಮತ್ತು ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್ ಅವರಿಂದ ಮಾಹಿತಿ ಪಡೆದುಕೊಳ್ಳುತ್ತೇನೆ. ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುವಂತೆ ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಹೇಳುತ್ತೇನೆ’ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆಂಜನಪ್ಪ, ಮಾಜಿ ಶಾಸಕ ಎಂ.ಶಿವಾನಂದ, ದಲಿತ ಸಂಘರ್ಷ ಸಮಿತಿ ಸಂಚಾಲಕ ಆನಂದ್ ಮತ್ತಿತರರು ಉಪಸ್ಥಿತರಿದ್ದರು.