ಚಾಮರಾಜನಗರ: `ದಲಿತರ ಸಾಹಿತ್ಯ, ಕಲೆ, ಕ್ರೀಡೆ, ಸಂಗೀತವನ್ನು ಗೌರವಿಸಿ ಪ್ರತಿಭಾನ್ವಿತರಿಗೆ ಪ್ರೋತ್ಸಾಹ ನೀಡಲು ದಲಿತ ಸಾಹಿತ್ಯ ಪರಿಷತ್ ಸ್ಥಾಪಿಸಲಾಗಿದ್ದು, ಎಲ್ಲರೂ ಸದಸ್ಯತ್ವ ಪಡೆದುಕೊಂಡು ಘಟಕವನ್ನು ಬಲಪಡಿಸಬೇಕು~ ಎಂದು ಪರಿಷತ್ನ ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜು ಬಿ. ಯರಗನಹಳ್ಳಿ ಹೇಳಿದರು.
ನಗರದ ಶಿಕ್ಷಕರ ಭವನದಲ್ಲಿ ಭಾನುವಾರ ನಡೆದ ದಲಿತ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಸಭೆಯಲ್ಲಿ ಅವರು ಮಾತನಾಡಿದರು. ಪರಿಷತ್ನಿಂದ ಕವಿಗೋಷ್ಠಿ, ಸಾಹಿತ್ಯ ಕಮ್ಮಟ, ದಲಿತ ಕೃತಿಗಳ ವಿಮರ್ಶೆ, ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಕುರಿತು ದತ್ತಿ ಉಪನ್ಯಾಸ ಏರ್ಪಡಿಸಲಾಗುವುದು. ಉತ್ತಮ ದಲಿತ ಕೃತಿಗಳನ್ನು ಪ್ರಕಟಿಸುವ ಉದ್ದೇಶ ಕೂಡ ಹೊಂದಲಾಗಿದೆ ಎಂದು ಹೇಳಿದರು.
ಕೊಪ್ಪಳದಲ್ಲಿ ನಡೆದ ಮೂರನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲಾ ಘಟಕವನ್ನು ಅಸ್ತಿತ್ವಕ್ಕೆ ತರಲಾಗಿದೆ. ಘಟಕವನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ಸಾವಿರ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ ಎಂದರು.
ಪರಿಷತ್ನ ಕಾರ್ಯದರ್ಶಿ ಬಿ. ಬಸವರಾಜು ಮಾತನಾಡಿ, ತಾಲ್ಲೂಕು ಘಟಕ ರಚಿಸುವುದು, ಸದಸ್ಯತ್ವ ನೋಂದಾಯಿಸುವ ಕುರಿತು ಮಾಹಿತಿ ನೀಡಿದರು.ಕವಿ ಮಹಾದೇವ ಶಂಕನಪುರ ಮಾತನಾಡಿ, ಸದಸ್ಯತ್ವ ನೋಂದಣಿ ಮಾಡಿಸುವುದರ ಮೂಲಕ ತಾಲ್ಲೂಕು ಹಾಗೂ ಜಿಲ್ಲಾ ಘಟಕವನ್ನು ಉದ್ಘಾಟನೆ ಮಾಡಬೇಕಿದೆ. ಪರಿಷತ್ತನ್ನು ಬಲಪಡಿಸಲು ದಲಿತ ಯುವ ಮನಸ್ಸುಗಳು ಮುಂದಾಗಬೇಕು ಎಂದು ಸಲಹೆ ನೀಡಿದರು.
ಉಪಾಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ, ಖಜಾಂಚಿ ಸಿ. ಲಿಂಗಯ್ಯ, ದಲಿತ ಮುಖಂಡ ವೆಂಕಟರಮಣಸ್ವಾಮಿ ಮಾತನಾಡಿದರು. ಸಭೆಯಲ್ಲಿ ರಘೋತ್ತಮ, ಎಂ. ಶಿವಕುಮಾರ್ ಕೆಂಪನಪುರ, ರವಿತೇಜ್, ಎಸ್.ಜಿ. ಸುರೇಶ್ ಸಿದ್ದಯ್ಯನಪುರ, ಎಂ. ಶಿವಣ್ಣ, ಚನ್ನಂಜಕುಮಾರ್, ಎಂ. ಮಹದೇವಸ್ವಾಮಿ, ಪ್ರಶಾಂತ್ ಕುಮಾರ್, ಪಿ. ಸಂಘಸೇನ ಹಾಜರಿದ್ದರು.
ಸಂಚಾಲಕರ ನೇಮಕ: ತಾಲ್ಲೂಕು ಮಟ್ಟದಲ್ಲಿ ಸದಸ್ಯತ್ವ ನೋಂದಣಿಗಾಗಿ ಸಂಚಾಲಕರನ್ನು ನೇಮಕ ಮಾಡಲಾಗಿದೆ.ಚಾಮರಾಜನಗರ ತಾಲ್ಲೂಕಿಗೆ ಪಿ. ಸಿದ್ದರಾಜು ದೊಡ್ಡರಾಯಪೇಟೆ ಮತ್ತು ನಂಜರಾಜ್ ಹೊಂಗನೂರು, ಗುಂಡ್ಲುಪೇಟೆ ತಾಲ್ಲೂಕಿಗೆ ಕಾಳಿಂಗಸ್ವಾಮಿ ಮತ್ತು ಸುಭಾಷ್ ಮಾಡ್ರಳ್ಳಿ, ಯಳಂದೂರು ತಾಲ್ಲೂಕಿಗೆ ರವಿಕುಮಾರ್ ಮತ್ತು ನಂಜುಂಡಯ್ಯ, ಕೊಳ್ಳೇಗಾಲ ತಾಲ್ಲೂಕಿಗೆ ಮಾ. ಸುರೇಶ್ ಮತ್ತು ಮದ್ದೂರು ದೊರೆಸ್ವಾಮಿ ಹಾಗೂ ಹನೂರು ವಲಯಕ್ಕೆ ಕೆ. ರಾಜು ಕಾಮಗೆರೆ ಅವರನ್ನು ನೇಮಕ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.